CrimeDistricts

ಇನ್ಸ್ಟಾಗ್ರಾಂನಲ್ಲಿ ಪ್ರೀತಿ; 2 ದಿನ ಸಂಸಾರ ಮಾಡಿ ಎಸ್ಕೇಪ್‌..!

ಬಾಗಲಕೋಟೆ; ಸೋಷಿಯಲ್‌ ಮೀಡಿಯಾ ಬಂದ ಮೇಲೆ ಎಲ್ಲೆಲ್ಲೋ ಇದ್ದವರೆಲ್ಲಾ ಕನೆಕ್ಟ್‌ ಆಗ್ತಾರೆ. ಯಾರ್ಯಾರಿಗೋ ಲವ್‌ ಆಗುತ್ತೆ. ಅದು ಒಮ್ಮೊಮ್ಮೆ ಮದುವೆ ತನಕವೂ ಬರುತ್ತೆ. ಅನಂತರ ನಡೆಯೋದೇ ದೊಡ್ಡ ಸುದ್ದಿಯಾಗುತ್ತದೆ. ಇಂತಹ ಪ್ರಸಂಗಗಳು ನಡೆಯುತ್ತಲೇ ಇವೆ.

ಇದೀಗ ಬಾಗಲಕೋಟೆಯ ಯುವಕನೊಬ್ಬನಿಗೆ ಬಿಹಾರ ಮೂಲದ ಮಹಿಳೆಯೊಬ್ಬಳು ಇನ್ಸ್ಟಾಗ್ರಾಮ್‌ ನಲ್ಲಿ ಪರಿಚಿಯವಾಗಿದ್ದಳು. ಅದು ಪ್ರೀತಿಯಾಗಿ ಮಾರ್ಪಟ್ಟಿದೆ. ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದಾರೆ. ಅದಕ್ಕಾಗಿ, ಬಾಗಲಕೋಟೆಯ ಯುವಕನೇ ಬಿಹಾರಕ್ಕೆ ಹೋಗಿದ್ದಾನೆ. ಅಲ್ಲಿ ಮಹಿಳೆಯ ಮನೆಯವರೇ ಮುಂದೆ ನಿಂತು ಮದುವೆ ಮಾಡಿಸಿ, ಇಬ್ಬರನ್ನೂ ಬಾಗಲಕೋಟೆಗೆ ಕಳುಹಿಸಿ ಕೊಟ್ಟಿದ್ದಾರೆ. ಇಲ್ಲಿ ಎರಡು ದಿನ ಸಂಸಾರದ ನಡೆಸಿದ ವ್ಯಕ್ತಿ, ಇದೀಗ ಮಹಿಳೆಯನ್ನು ನಡುದಾರಿಯಲ್ಲಿ ಬಿಟ್ಟು ಎಸ್ಕೇಪ್‌ ಆಗಿದ್ದಾನೆ.

ಬಾಗಲಕೋಟೆಯ ಇಮ್ರಾನ್‌ ಕಿಲಾರಿ ಎಂಬಾತನೇ ಈ ಕೆಲಸ  ಮಾಡಿದಾತ. ಈ ಬಿಹಾರದಿಂದ ಮದುವೆಯಾಗಿ ಕರೆದುಕೊಂಡು ಬಂದಿದ್ದ ಮಹಿಳೆಯನ್ನು ಕದಾಂಪುರ ಪುನರ್ವಸತಿ ಕೇಂದ್ರದಲ್ಲಿ ಬಾಡಿಗೆ ಮನೆ ಪಡೆದು ಇಟ್ಟಿದ್ದ. ಅಲ್ಲಿ ಆಕೆಯೊಂದಿಗೆ ಎರಡು ದಿನ ಸಂಸಾರ ನಡೆಸಿದ್ದಾನೆ. ಆಸೆ ಎಲ್ಲಾ ತೀರಿದ ಮೇಲೆ ಇಲ್ಲೇ ಹೋಗಿ ಬರುತ್ತೇನೆ ಎಂದು ಹೋದವನು ಎರಡು ದಿನ ಆದರೂ ಬಂದಿಲ್ಲ. ಮೊಬೈಲ್‌ ಕರೆಗೂ ಉತ್ತರಿಸುತ್ತಿಲ್ಲ.

ಇದರಿಂದಾಗಿ ಬಿಹಾರದ ಮಹಿಳೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಕೆ ಭಾಷೆಗೆ ಕೂಡಾ ಸಮಸ್ಯೆಯಾಗಿದ್ದು, ತನ್ನ ಗೋಳು ಯಾರಿಗೆ ಹೇಳಬೇಕು ಎಂದು ಗೋಗರೆಯುತ್ತಿದ್ದಾಳೆ. ನಾನು ಇಲ್ಲೇ ಸಾಯುತ್ತೇನೆ ಬೇಕಾದ್ರೆ, ಬಿಹಾರಕ್ಕೆ ವಾಪಸ್‌ ಹೋಗೋದಿಲ್ಲ ಅಂತ ಮಹಿಳೆ ಪಟ್ಟು ಹಿಡಿದಿದ್ದಾಳೆ.

 

Share Post