DistrictsPolitics

ದಕ್ಷಿಣ ಪದವೀಧರರ ಕ್ಷೇತ್ರದಲ್ಲಿ ಮಧು ಮಾದೇಗೌಡ ಜಯಭೇರಿ

ಮೈಸೂರು; 29 ಗಂಟೆಗಳು ಸುದೀರ್ಘ ಮತ ಎಣಿಕೆ ನಂತರ ದಕ್ಷಿಣ ಪದವೀಧರರ ಕ್ಷೇತ್ರದ ವಿಧಾನಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಮಧು ಜಿ.ಮಾದೇಗೌಡ ವಿಜಯಶಾಲಿಯಾಗಿದ್ದಾರೆ. ತಮ್ಮ ಸಮೀಪದ ಪ್ರತಿಸ್ಪರ್ಧಿಸಿ ಬಿಜೆಪಿಯ ಮೈ.ವಿ.ರವಿಶಂಕರ್‌ ಅವರನ್ನು 12205 ಮತಗಳ ಅಂತರದಿಂದ ಸೋಲಿಸಿದ್ದಾರೆ.

ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡ ಬಿಜೆಪಿಯ ಮೈ.ವಿ.‌ರವಿಶಂಕರ್ 33,878 ಮತಗಳನ್ನು ಗಳಿಸಿ ಪರಾಭವಗೊಂಡಿದ್ದಾರೆ. ಎಲಿಮಿನೇಷನ್ ಪ್ರಕ್ರಿಯೆಯಲ್ಲಿ 17 ಅಭ್ಯರ್ಥಿಗಳನ್ನು ಎಲಿಮಿನೇಟ್ ಮಾಡಿದ ಬಳಿಕವೂ, ಅತಿ ಹೆಚ್ಚು ಮತ ಗಳಿಸಿದ್ದ ಮಧು ಜಿ.ಮಾದೇಗೌಡ ಅವರಿಗೆ ನಿಗದಿತ ಕೋಟಾ ತಲುಪಲು (46083) 808 ಮತಗಳ ಕೊರತೆ ಎದುರಾಯಿತು. ಆಗ ಚುನಾವಣಾ ಆಯೋಗದ ನಿರ್ದೇಶನದಂತೆ ಪ್ರತಿಸ್ಪರ್ಧಿ ಮೈ.ವಿ. ರವಿಶಂಕರ್ ಅವರ ಮತಪತ್ರದಲ್ಲಿ ಅಗತ್ಯವಿರುವ 808 ಮತಗಳು ಬರುವವರೆಗೆ ಮಾತ್ರವೇ ಎಣಿಕೆ ಪ್ರಕ್ರಿಯೆಯನ್ನು ಅಧಿಕಾರಿಗಳು ನಡೆಸಿದರು. ಕೋಟ ತಲುಪುತ್ತಿದ್ದಂತೆಯೇ ಎಣಿಕೆ ಕಾರ್ಯ ನಿಲ್ಲಿಸಿ, ಮಧು ಅವರನ್ನು ವಿಜೇತ ಅಭ್ಯರ್ಥಿ ಎಂದು ಅಧಿಕೃತವಾಗಿ ಘೋಷಿಸಲಾಯಿತು.

ಬುಧವಾರ ಬೆಳಿಗ್ಗೆ 8ಕ್ಕೆ ಆರಂಭವಾಗಿದ್ದ ಮತ ಎಣಿಕೆ ಪ್ರಕ್ರಿಯೆಯು ಗುರುವಾರ ಮಧ್ಯಾಹ್ನ 1ರ ಸುಮಾರಿಗೆ ಮುಕ್ತಾಯವಾಯಿತು. ಫಲಿತಾಂಶಕ್ಕಾಗಿ ನಿರಂತರ 29 ಗಂಟೆಗಳವರೆಗೆ ಪ್ರಕ್ರಿಯೆ ನಡೆಯಿತು.

Share Post