CrimeDistrictsPolitics

ಮಾಜಿ ಸ್ಪೀಕರ್‌ ರಮೇಶ್‌ಕುಮಾರ್‌ ಪರಮಾಪ್ತನ ಬರ್ಬರ ಹತ್ಯೆ

ಕೋಲಾರ; ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಅವರ ಪರಮಾಪ್ತ ಎಂ.ಶ್ರೀನಿವಾಸ್‌ ಅವರನ್ನು ಬರ್ಬರ ಹತ್ಯೆ ಮಾಡಲಾಗಿದೆ. ಶ್ರೀನಿವಾಸಪುರ ಪಟ್ಟಣದ ಹೊರವಲಯದ ಹೊಗಳಗೆರೆ ಬಳಿ ಈ ಕೃತ್ಯ ಎಸಗಲಾಗಿದೆ. ಆರು ಜನರ ತಂಡ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಪರಾರಿಯಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಎಂ.ಶ್ರೀನಿವಾಸ್‌ ಅವರನ್ನು ಕೋಲಾರದ ಜಾಲಪ್ಪ ಆಸ್ಪತ್ರೆಗೆ ಸೇರಿಸಲಾಯಿತಾದರೂ, ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

ಶ್ರೀನಿವಾಸ್‌ ಅವರು ರಮೇಶ್‌ ಕುಮಾರ್‌ ಅವರ ಪರಮಾಪ್ತರಾಗಿದ್ದರು. ಅವರು ಈ ಹಿಂದೆ ಜಿಲ್ಲಾ ಪಂಚಾಯತ್‌ ಅಧ್ಯಕ್ಷರಾಗಿದ್ದರು. ಜೊತೆಗೆ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಪ್ರಮುಖ ಕಾಂಗ್ರೆಸ್‌ ಮುಖಂಡರಾಗಿದ್ದರು.  ಹೊಗಳಗೆರೆ ಬಳಿ ಬಾರ್‌ ಒಂದರ ಕಟ್ಟಡ ಕಾಮಗಾರಿ ನಡೆಯುತ್ತಿತ್ತು. ಅದನ್ನು ವೀಕ್ಷಿಸಲು ಶ್ರೀನಿವಾಸ್‌ ಬಂದಿದ್ದರು. ಈ ವೇಳೆ ಆರು ಜನರ ತಂಡ ಈ ದಾಳಿ ಮಾಡಿದೆ.

ಶ್ರೀನಿವಾಸಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಡುವೆ ರಕ್ತಸಿಕ್ತ ರಾಜಕೀಯ ನಡೆಯುತ್ತಲೇ ಇರುತ್ತದೆ. ಶ್ರೀನಿವಾಸ್‌ ಕೂಡಾ ಜಿದ್ದಾಜಿದ್ದಿನ ರಾಜಕೀಯಕ್ಕೆ ಹೆಸರುವಾಸಿಯಾಗಿದ್ದರು. ದ್ವೇಷದ ರಾಜಕಾರಣಕ್ಕೆ ಈ ಕೊಲೆ ನಡೆದಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.

 

Share Post