CrimeDistricts

ದಸರಾಗೆ ಬೋನಸ್‌ ನೀಡದಿದ್ದಕ್ಕೆ ಆಕ್ರೋಶ; ಗ್ರಾಪಂ ಕಚೇರಿಗೆ ಚಪ್ಪಲಿ ಹಾರ

ದೇವನಹಳ್ಳಿ; ಪ್ರತಿ ವರ್ಷದಂತೆ ದಸರಾ ಹಬ್ಬಕ್ಕೆ ಸಮವಸ್ತ್ರ, ಬೋನಸ್‌ ನೀಡಲಿಲ್ಲ ಎಂದು ಬೇಸರಗೊಂಡ ಆವತಿ ಪಂಚಾಯಿತಿಯ ಸಿಬ್ಬಂದಿಯೊಬ್ಬ ಪಂಚಾಯಿತಿ ಕಟ್ಟಡಕ್ಕೆ ಚಪ್ಪಲಿ ಹಾರ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾನೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ತಾಲ್ಲೂಕು ಪಂಚಾಯಿತಿ ಅಧಿಕಾರಿ ಸುನೀಲ್‌ ಕೂಡಲೇ ಚಪ್ಪಲಿ ಹಾರವನ್ನು ತೆಗೆಸಿದ್ದಾರೆ. ಕಚೇರಿಯ ಸಿಸಿಟಿವಿ ಪರಿಶೀಲಿಸಿದಾಗ ಆವತಿ ಗ್ರಾ.ಪಂ. ಸ್ವಚ್ಛತಾ ಕೆಲಸಗಾರ ಕೃಷ್ಣಪ್ಪ ಈ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ. ನಂತರ ಆತನನ್ನು ಕರೆಯಿಸಿ ವಿಚಾರಣೆ ನಡೆಸಿದ್ದಾರೆ. ‘ಪ್ರತಿ ವರ್ಷದಂತೆ ಈ ಬಾರಿ ಬೋನಸ್‌ ಹಾಗೂ ಸಮವಸ್ತ್ರ ನೀಡಲಿಲ್ಲ. ಇದರಿಂದ ನಾನು ಕುಡಿದ ಮತ್ತಿನಲ್ಲಿ ಈ ರೀತಿ ಮಾಡಿದ್ದೇನೆ. ಮತ್ತೊಮ್ಮೆ ಆಗದಂತೆ ನೋಡಿಕೊಳ್ಳುತ್ತೇನೆ ಕ್ಷಮಿಸಿ’ ಎಂದು ಆತ ತಪ್ಪೊಪ್ಪಿಕೊಂಡಿದ್ದಾನೆ.

ಆವತಿ ಗ್ರಾಮ ಪಂಚಾಯಿತಿ ಪಿಡಿಒ ಶಿವರಾಜ್‌ ವಿಜಯಪುರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ದೂರು ಪರಿಶೀಲಿಸಿ ಗಂಭೀರವಲ್ಲದ ಕೃತ್ಯವೆಂದು ಪ್ರಕರಣ ದಾಖಲಿಸಿದ್ದಾರೆ.

Share Post