DistrictsPolitics

ಕಾಂಗ್ರೆಸ್‌ನವರದ್ದು ಹಂಡ್ರೆಸ್‌ ಪರ್ಸೆಂಟ್‌ ಕಮೀಷನ್‌ ಸರ್ಕಾರ; ಸಿಎಂ ಬೊಮ್ಮಾಯಿ

ದೊಡ್ಡಬಳ್ಳಾಪುರ; ಕಾಂಗ್ರೆಸ್‌ ಪಕ್ಷದಿಂದ ಬಿಜೆಪಿಗೆ ಬಂದವರೆಲ್ಲರೂ ವೀರರು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹಾಡಿಹೊಗಳಿದ್ದಾರೆ. ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಂದಿನ ಚುನಾವಣೆಯಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಅಧಿಕಾರಕ್ಕೆ ಏನು ಬೇಕಾದರೂ ಮಾಡಲು ರೆಡಿ ಇದ್ದಾರೆ. ಆದ್ರೆ ಅವರ ಆಟ ನಡೆಯೋದಿಲ್ಲ ಎಂದು ಸಿಎಂ, ಅನ್ನಭಾಗ್ಯದ ಚೀಲ ನಿಮ್ಮದು, ಅಕ್ಕಿ ಮೋದಯವರದ್ದು ಎಂದು ಲೇವಡಿ ಮಾಡಿದರು. ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತೆ ಎಂಬ ಸಂದೇಶವನ್ನು ಈ ಸಮಾವೇಶದ ಮೂಲದ ಇಡೀ ರಾಜ್ಯ ರವಾನಿಸಿದ್ದೇವೆ. ನಮ್ಮ ಶಕ್ತಿ ಏನೆಂಬುದು ಈ ಸಮಾವೇಶದಿಂದ ಸಾಬೀತಾಗಿದೆ ಎಂದು ಸಿಎಂ ಹೇಳಿದರು. ನಮ್ಮ ರಾಜಾಹುಲಿ ಯಡಿಯೂರಪ್ಪ ಅವರು. ೨೦೧೯ರಲ್ಲೇ ಯಡಿಯೂರಪ್ಪ ಸಿಎಂ ಆಗಬೇಕಿತ್ತು. ಆದ್ರೆ ಕಾಂಗ್ರೆಸ್‌ನ ಹುನ್ನಾರದಿಂದ ಅದು ಕೈತಪ್ಪಿತು ಎಂದು ಸಿಎಂ ಇದೇ ವೇಳೆ ಹೇಳಿದರು.

ಅನ್ನಭಾಗ್ಯ ಯೋಜನೆಯಲ್ಲಿ ದಂಧೆ ಮಾಡಿದಿರಿ, ಲ್ಯಾಪ್‌ ಟಾಪ್‌ ಕೊಡುವುದರಲ್ಲೂ ಕೂಡಾ ದಂಧೆ ಮಾಡಿದಿರಿ, ನಿಮ್ಮದು ಹಂಡ್ರೆಡ್‌ ಪರ್ಸೆಂಟ್‌ ಕಮೀಷನ್‌ ಸರ್ಕಾರ ಎಂದು ಹಿಂದಿನ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಸಿಎಂ ಹರಿಹಾಯ್ದರು. ನಾವು ರಾಜ್ಯದಲ್ಲಿ ಮತ್ತೆ ಕಮಲವನ್ನು ಅರಳಿಸುತ್ತೇವೆ. ನಿಮಗೆ ತಾಕತ್ತಿದ್ದರೆ ಅದನ್ನು ತಡೆಯಿರಿ ನೋಡೋಣ ಎಂದು ಸಿಎಂ ಬೊಮ್ಮಾಯಿ ಸವಾಲು ಹಾಕಿದರು.

ಕೂಲಿ ಕಾರ್ಮಿಕರು ಹಾಗೂ ಕೃಷಿ ಕಾರ್ಮಿಕರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ಮಾಡಿದ್ದೇವೆ. ಎಸ್‌ಸಿ, ಎಸ್‌ಟಿ ಹಾಸ್ಟೆಲ್‌ಗಳನ್ನು ಹೆಚ್ಚಳ ಮಾಡಿದ್ದೇವೆ. ಹಾಲು ಉತ್ಪಾದಕರಿಗೆ ಒಂದು ಬ್ಯಾಂಕ್‌ ಸ್ಥಾಪನೆ ಮಾಡುತ್ತಿದ್ದೇವೆ. ಜನರಿಗೆ ಉಚಿತವಾಗಿ ಕೊವಿಡ್‌ ಲಸಿಕೆ ನೀಡಿದ್ದೇವೆ. ನೀರಾವರಿಗಾಗಿ ನಾವು ಹೆಚ್ಚಿನ ಆದ್ಯತೆ ನೀಡಿದ್ದೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

Share Post