Districts

ಮಳೆಹಾನಿ ಪರಿಹಾರಕ್ಕೆ ಹಣದ ಕೊರತೆ ಇಲ್ಲ; ಕೇಂದ್ರದಿಂದ 739 ಕೋಟಿ ಬಿಡುಗಡೆ – ಸಿಎಂ ಬೊಮ್ಮಾಯಿ

ಮೈಸೂರು; ಮಳೆ ಹಾನಿ ಪರಿಹಾರಕ್ಕೆ ರಾಜ್ಯದಲ್ಲಿ ಹಣದ ಕೊರತೆ ಇಲ್ಲ. ಕೇಂದ್ರ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ 739 ಕೋಟಿ ರೂಪಾಯಿ ಬಿಡುಗಡೆಯಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಲು ಅವರು ಬೆಂಗಳೂರಿನಿಂದ ಮೈಸೂರಿಗೆ ವಿಮಾನದಲ್ಲಿ ಆಗಮಿಸಿದರು. ಈ ವೇಳೆ ಮಾತನಾಡಿದ ಅವರು,ನದಿ ಪಾತ್ರದಲ್ಲಿ ಸಂಭವಿಸುವ ಪ್ರವಾಹ ಹಾನಿ ತಡೆಗೆ ಶಾಶ್ವತ ಪರಿಹಾರಕ್ಕಾಗಿ‌ ಹಾಗೂ ಮನೆಗಳನ್ನು ಸ್ಥಳಾಂತರಿಸಲು ತಜ್ಞರ ಅಭಿಪ್ರಾಯ ಕೇಳಲಾಗಿದೆ ಎಂದು ಹೇಳಿದ್ದಾರೆ.

ಮಳೆಯಿಂದ ಪ್ರಾಣಹಾನಿ, ಭೂ ಕುಸಿತ , ಬೆಳೆಹಾನಿ ಉಂಟಾಗಿದ್ದು, ಸಮೀಕ್ಷೆ ಹಾಗೂ ಪರಿಹಾರ ಕಾರ್ಯ ಭರದಿಂದ ಸಾಗಿದೆ. ಭಾರಿ ಮಳೆಯಿಂದಾಗಿ ಹಲವು ಕಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಭೂ ಕುಸಿತವುಂಟಾಗಿದೆ. ಕೊಡಗಿನಲ್ಲಿ ಲಘು ಭೂಕಂಪ,‌ ಕರಾವಳಿಯಲ್ಲಿ ಕಡಲ ಕೊರೆತ ಹಾಗೂ ಉತ್ತರ ಕರ್ನಾಟಕದ ನದಿ ಪಾತ್ರಗಳಲ್ಲಿ ಪ್ರವಾಹ ಹಾನಿಯಾಗಿದೆ‌. ಭೂ ಕುಸಿತ ಸಂಭವಿಸುತ್ತಿರುವ ಸೂಕ್ಷ್ಮ ಪ್ರದೇಶಗಳಲ್ಲಿರುವ ಜನರನ್ನು ಸುರಕ್ಷಿತ ಸ್ಥಳಗಳಲ್ಲಿ ನೆಲೆಸುವಂತೆ ಮಾಡಲು ಮನವೊಲಿಸಲಾಗುವುದು ಎಂದು ಸಿಎಂ ತಿಳಿಸಿದರು.

Share Post