Districts

ಶಿಕ್ಷಕನ ಅಜಾಗರೂಕ ಕಾರು ಚಾಲನೆ; ಅಪಘಾತದಲ್ಲಿ ಮೂವರು ದುರ್ಮರಣ

ಹಾವೇರಿ; ಹಾವೇರಿ ಜಿಲ್ಲೆ ಹಂಸಭಾವಿಯ ಸುತ್ತಕೋಟೆ ಬಳಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ ಹೊಡೆದು ಭಾರಿ ದುರಂತ ಸಂಭವಿಸಿದೆ. ದುರಂತದಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಶಿಕ್ಷಕ ಹಾಗೂ ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರಾಣೆಬೆನ್ನೂರು ನಗರದ ನಿವಾಸಿ, ಶಿಕ್ಷಕ ಜಯಪ್ರಕಾಶ್ (48) ಹಾಗೂ ಹಿರೇಕೆರೂರು ತಾಲ್ಲೂಕಿನ ಆತಿನಕೊಪ್ಪ ಗ್ರಾಮದ ಒಂದೇ ಕುಟುಂಬದ ಶಾಲಿನಿ(8) ಮತ್ತು ಯಶೋದಾ(9) ಮೃತಪಟ್ಟವರು ಎಂದು ತಿಳಿದುಬಂದಿದೆ.

ಜಯಪ್ರಕಾಶ್ ಅವರೇ ಕಾರು ಚಲಾಯಿಸುತ್ತಿದ್ದರು. ಅವರು ಹಂಸಭಾವಿ ಕಡೆಯಿಂದ ರಾಣೆಬೆನ್ನೂರಿಗೆ ತೆರಳುತ್ತಿದ್ದರು. ಈ ವೇಳೆ ಕಾರು ನಿಯಂತ್ರಿಣ ತಪ್ಪಿದೆ. ರಸ್ತೆಯಲ್ಲಿ ಆಟವಾಡುತ್ತಿದ್ದ ಮಕ್ಕಳ ಮೇಲೆ ಕಾರು ಹರಿದಿದೆ. ನಂತರ ಅದು ನೇರವಾಗಿ ಹೋಗಿ ಮರಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ ಜಯಪ್ರಕಾಶ್‌ ಸಾವನ್ನಪ್ಪಿದ್ದಾರೆ. ಇನ್ನು ಕಾರಿನಲ್ಲಿದ್ದ ಇಬ್ಬರು ಮಹಿಳೆಯರು ಕೂಡಾ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ.

ಗಂಭೀರವಾಗಿ ಗಾಯಗೊಂಡು ಸಾವು-ಬದುಕಿನ ನಡುವೆ ನರಳಾಡುತ್ತಿದ್ದ ಮಕ್ಕಳನ್ನು ಗ್ರಾಮಸ್ಥರು ತಕ್ಷಣ ಹಿರೇಕೆರೂರು ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರೂ ಮಕ್ಕಳು ಬದುಕಲಿಲ್ಲ. ಈ ಬಗ್ಗೆ ಹಂಸಭಾವಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

 

Share Post