CrimeNational

ಸುಪಾರಿ ಕೊಟ್ಟು ತಂದೆ-ತಾಯಿಯಿಂದಲೇ ಮಗನ ಹತ್ಯೆ; ಅರೆಸ್ಟ್‌

ಹೈದರಾಬಾದ್; ಸುಪಾರಿ ಕೊಟ್ಟು ಹೆತ್ತ ಮಗನನ್ನೇ ಹತ್ಯೆ ಮಾಡಿಸಿದ್ದ ಆರೋಪ ಮೇಲೆ ದಂಪತಿ ಹಾಗೂ ಇತರೆ ನಾಲ್ವರು ಕೊಲೆಗಾರರನ್ನು ತೆಲಂಗಾಣದ ಸೂರ್ಯಪೇಟ್‌ ಪೊಲೀಸರು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

26 ವರ್ಷದ ಸಾಯಿರಾಮ್‌ ಕೊಲೆಯಾದ ಯುವಕ. ಈತ ಕುಡಿತದ ದಾಸನಾಗಿದ್ದು, ಹಣ ನೀಡುವಂತೆ ಪದೇ ಪದೇ ಪೋಷಕರನ್ನು ಪೀಡುಸುತ್ತಿದ್ದ ಎಂದು ತಿಳಿದುಬಂದಿದೆ. ಇದರಿಂದ ಬೇಸತ್ತು ತಂದೆ-ತಾಯಿಯೇ 8 ಲಕ್ಷ ರೂಪಾಯಿಗೆ ಸುಪಾರಿ ನೀಡಿ ಸಾಯಿರಾಮ್‌ನನ್ನು ಕೊಲೆ ಮಾಡಿಸಿದ್ದಾರೆ. ನಂತರ ಕಾರಿನಲ್ಲಿ ಶವವನ್ನು ತಂದು ಸೂರ್ಯಪೇಟ್‌ನ ಮೂಸಿಯಲ್ಲಿ ಬಿಸಾಕಿಹೋಗಿದ್ದರು.

ಈ ಪ್ರಕರಣದ ಸಂಬಂಧ ಮೃತ ಸಾಯಿರಾಮ್‌ ತಂದೆ-ತಾಯಿಯಾದ ಕ್ಷತ್ರಿಯ ರಾಮ್‌ ಸಿಂಗ್‌ ಹಾಗೂ ರಾಣಿ ಬಾಯಿಯನ್ನು ಬಂಧಿಸಲಾಗಿದೆ. ಇದರ ಜೊತೆಗೆ ನಾಲ್ವರು ಸುಪಾರಿ ಹಂತಕರನ್ನೂ ಬಂಧಿಸಲಾಗಿದೆ. ಸಾಯಿರಾಮ್‌ ಕಾಣೆಯಾಗಿದ್ದರ ಬಗ್ಗೆ ಪೋಷಕರು ದೂರು ನೀಡಿರಲಿಲ್ಲ. ಜೊತೆಗೆ ಮೃತದೇಹವನ್ನು ಗುರುತಿಸಲು ಬಂದಾಗ ಕೊಲೆಯಾದ ದಿನ ದೇಹ ಸಾಗಿಸಲು ಬಳಸಿದ್ದ ಕಾರಿನಲ್ಲೇ ಅವರು ಬಂದಿದ್ದರು. ಸಿಸಿಟಿವಿಯ ದೃಶ್ಯಾವಳಿಯಲ್ಲಿ ಕಾರಿನ ಮಾಹಿತಿ ಸಿಕ್ಕಿದ್ದರಿಂದ ಅನುಮಾನಗೊಂಡು ಪೋಷಕರನ್ನು ವಿಚಾರಣೆ ನಡೆಸಿದಾಗ ಸುಪಾರಿ ಹತ್ಯೆ ವಿಚಾರ ಬಯಲಾಗಿದೆ. ಈಗ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Share Post