CrimeDistricts

ಸರ್ಕಾರಿ ಬಸ್‌ ಟೈರ್‌ ಸ್ಫೋಟ; ಚನ್ನಪಟ್ಟಣ ಬಳಿ ಹಳ್ಳಕ್ಕೆ ಉರುಳಿದ ಬಸ್‌

ರಾಮನಗರ; ಟೈರ್‌ ಸ್ಫೋಟಗೊಂಡ ಪರಿಣಾಮ ಸರ್ಕಾರಿ ಬಸ್‌ ಒಂದು ಹಳ್ಳಕ್ಕೆ ಉರುಳಿದ ಘಟನೆ ರಾಮನಗರ ಜಿಲ್ಲೆ ಚನ್ನಪಟ್ಟಣ ಬಳಿ ನಡೆದಿದೆ. ಆದರೆ ಅದೃಷ್ಟವಶಾತ್‌ ಯಾವುದೇ ಅನಾಹುತ ಸಂಭವಿಸಿಲ್ಲ.

ಚನ್ನಪಟ್ಟಣ ತಾಲ್ಲೂಕಿನ ಗೌಡಗೆರೆ-ಬುಗಡನದೊಡ್ಡ ಮಧ್ಯೆ ಈ ದುರ್ಘಟನೆ ಸಂಭವಿಸಿದೆ. ಬೆಳಗ್ಗೆ ಬಸ್‌ ಟೈರ್‌ ಸ್ಫೋಟಗೊಂಡಿದ್ದು, ಚಾಲಕನ ನಿಯಂತ್ರಣ ತಪ್ಪಿದೆ. ಪಕ್ಕದಲ್ಲೇ ಇದ್ದ ಹಳ್ಳಕ್ಕೆ ಬಸ್‌ ವಾಲಿದೆ. ಆದರೆ ಚಾಲಕನ ಜಾಗರೂಕತೆಯಿಂದಾಗಿ ಯಾವುದೇ ಅನಾಹುತ ಸಂಭವಿಸಿಲ್ಲ.

ಟೈರ್‌ ಹಳೆಯದಾಗಿದ್ದರೂ, ಅಧಿಕಾರಿಗಳು ಅದನ್ನು ಬದಲಿಸಿಲ್ಲ. ಹೀಗಾಗಿಯೇ ಈ ಅನಾಹುತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಸರ್ಕಾರಿ ಬಸ್‌ನಲ್ಲಿ ಸುಮಾರು ೬೦ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರು. ಇದರಲ್ಲಿ ವಿದ್ಯಾರ್ಥಿಗಳೇ ಹೆಚ್ಚಾಗಿದ್ದರು ಎಂದು ತಿಳಿದುಬಂದಿದೆ. ಟೈರ್‌ ಸ್ಫೋಟಗೊಳ್ಳುತ್ತಿದ್ದಂತೆ ಪ್ರಯಾಣಿಕರು ಕಿರುಚಿಕೊಂಡಿದ್ದಾರೆ. ಆದರೆ, ಚಾಲಕ ಮಾತ್ರ ಗಲಿಬಿಲಿಗೊಳ್ಳದೆ, ನಿಧಾನವಾಗಿ ಬಸ್‌ನ್ನು ಹಳ್ಳಕ್ಕೆ ಇಳಿಸಿ, ಪ್ರಯಾಣಿಕರನ್ನು ರಕ್ಷಿಸಿದ್ದಾನೆ.

Share Post