Cinema

ಕಿರಾತಕ ನಿರ್ದೇಶಕ ಪ್ರದೀಪ್‌ ರಾಜ್‌ ಕೊರೊನಾಗೆ ಬಲಿ..!

ಬೆಂಗಳೂರು: ಯಶ್‌ ಅಭಿನಯದ ಕಿರಾತಕ ಚಿತ್ರ ನಿರ್ದೇಶಿಸಿದ್ದ ಪ್ರದೀಪ್‌ ರಾಜ್‌ ಕೊರೊನಾಗೆ ಬಲಿಯಾಗಿದ್ದಾರೆ. ಕೆಲ ದಿನಗಳ ಹಿಂದೆ ಪಾಂಡಿಚೆರಿಯ ಆಸ್ಪತ್ರೆಗೆ ದಾಖಲಾಗಿದ್ದ ಪ್ರದೀಪ್‌ ರಾಜ್‌, ಇಂದು ಬೆಳಗಿನ ಜಾವ ಮೂರು ಗಂಟೆ ಸಮಯದಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

ಪ್ರದೀಪ್‌ ರಾಜ್‌ ಅವರಿಗೆ 46 ವರ್ಷ ವಯಸ್ಸಾಗಿತ್ತು. ಅವರಿಗೆ ಡಯಾಬಿಟಿಸ್‌ ಇದ್ದು ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚೆಗೆ ಅವರಿಗೆ ಕೊರೊನಾ ಸೋಂಕು ತಗುಲಿತ್ತು. ಆರೋಗ್ಯದಲ್ಲಿ ಕೊಂಚ ಏರುಪೇರಾದ ಹಿನ್ನೆಲೆಯಲ್ಲಿ ಪಾಂಡಿಚೆರಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗಿನ ಜಾವ ಪ್ರದೀಪ್‌ ರಾಜ್‌ ಸಾವನ್ನಪ್ಪಿದ್ದಾರೆ.

ಪ್ರದೀಪ್‌ ರಾಜ್‌ ಅವರ ಅಂತ್ಯಕ್ರಿಯೆ ಮಧ್ಯಾಹ್ನದ ವೇಳೆ ನೆರವೇರಿಸಲಾಗುವುದು ಎಂದು ಅವರ ಸಹೋದರ ಪ್ರಶಾಂತ್‌ ರಾಜ್‌ ತಿಳಿಸಿದ್ದಾರೆ. ಪ್ರತಿಭಾನ್ವಿತ ನಿರ್ದೇಶಕರಾಗಿದ್ದ ಪ್ರದೀಪ್‌ ರಾಜ್‌, ಕನ್ನಡದ ಹಲವು ಚಿತ್ರಗಳನ್ನು ನಿರ್ದೇಶಿಸಿದ್ದರು. ಕಿರಾತಕ ಸಿನಿಮಾ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತ್ತು.

ಅಂಜದು ಗಂಡು, ಬೆಂಗಳೂರು-23, ಮಿಸ್ಟರ್‌ -420 ಮುಂತಾದ ಚಿತ್ರಗಳನ್ನು ಪ್ರದೀಪ್‌ ರಾಜ್‌ ನಿರ್ದೇಶಿಸಿದ್ದಾರೆ. ಪ್ರದೀಪ್‌ ರಾಜ್‌ಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ ಎಂದು ಗೊತ್ತಾಗಿದೆ.

Share Post