Cinema

ನಿರ್ದೇಶಕ ಸತ್ಯಪ್ರಕಾಶ್‌ ರಿಂದ ಸತ್ಯ ವಿತರಣಾ ಸಂಸ್ಥೆ ಆರಂಭ

ಬೆಂಗಳೂರು: ರಾಮಾ ರಾಮಾ ರೇ ಚಿತ್ರದ ಮೂಲಕ ಮನೆಮಾತಾಗಿರುವ ಸತ್ಯಪ್ರಕಾಶ್, ತಮ್ಮ ಸ್ನೇಹಿತರ ಬಳಗದೊಂದಿಗೆ ಸೇರಿ ಸತ್ಯ ಪಿಕ್ಚರ್ಸ್ ಎಂಬ ಸಂಸ್ಥೆ ಆರಂಭಿಸಿದ್ದರು. ಈಗ ಇದರ ಮುಂದಿನ ಹೆಜ್ಜೆಯಾಗಿ “ಸತ್ಯ ಸಿನಿ ವಿತರಣಾ ಎಂಬ ಸಂಸ್ಥೆ ಆರಂಭಿಸಿದ್ದಾರೆ. ನಿರ್ಮಾಪಕರಾದ ಪ್ರಕಾಶ್ ಪಾಂಡೇಶ್ವರ್, ದೀಪಕ್ ಗಂಗಾಧರ್, ಮಂಜುನಾಥ್. ಡಿ ಹಾಗೂ ಸತ್ಯ ಪಿಕ್ಚರ್ಸ್ ತಂಡದಿಂದ ಈ‌ ಹೊಸ ಪ್ರಯತ್ನಕ್ಕೆ ಸಾಥ್ ನೀಡಿದ್ದಾರೆ.
ಸತ್ಯ ಸಿನಿ ವಿತರಣಾ ಎಂಬ ಸಂಸ್ಥೆಯನ್ನ ನಟ ಧನಂಜಯ್‌ ಉದ್ಘಾಟಿಸಿದ್ದಾರೆ. ನಂತರ ಮಾತನಾಡಿದ ಅವರು, ನಾನು ಇಲ್ಲಿಗೆ  ಕಿರುಚಿತ್ರದಲ್ಲಿ ಅಭಿನಯಿಸಿದ್ದ ಧನಂಜಯನಾಗಿಯೇ ಬಂದಿದ್ದೀನಿ. ಯಾವುದೇ ಸೂಪರ್ ಸ್ಟಾರ್ ಆಗಿ ಬಂದಿಲ್ಲ. ಸತ್ಯಪ್ರಕಾಶ್ ಹೇಳುತ್ತಿದ್ದರು.ನಾವು ಬಂದಾಗಲೆಲ್ಲ ಹೊಸ ಅಲೆ ಏಳುತ್ತದೆ ಅಂದುಕೊಳ್ಳಬೇಕು.‌ ನನ್ನ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರ ಬಿಡುಗಡೆಯಾದಾಗ ಮೊದಲ‌ ಅಲೆ ಬಂತು.‌ ಯುವರತ್ನ ಬಂದಾಗ ಎರಡನೇ ಅಲೆ‌ ಈಗ “ಬಡವ ರಾಸ್ಕಲ್” ಬಂದಿದೆ. ಈಗ ಮೂರನೇ ಅಲೆ ಶುರುವಾಗಿದೆ ಎಂದರು.
ನನ್ನ ಬಳಿ ಹೆಚ್ಚು ದುಡ್ಡಿಲ್ಲ. ನಾನು ಮೂಲತಃ ಬರಹಗಾರ ನಿರ್ದೇಶಕ ಅಷ್ಟೇ. ಕೆಲವು ದಿನಗಳ ಹಿಂದೆ ಮಂಗಳೂರಿನಲ್ಲಿ ಪ್ರಕಾಶ್ ಪಾಂಡೇಶ್ವರ್ ಅವರನ್ನು ಭೇಟಿಯಾದಾಗ ವಿತರಣೆಯ ಬಗ್ಗೆ ಹೇಳಿದರು. ವಿತರಣಾ ಸಂಸ್ಥೆ ಆರಂಭಿಸಬೇಕೆಂಬ ಆಸೆಯಿತ್ತು. ಅದಕ್ಕೆ ಮೂಲ ಕಾರಣ ನನ್ನ ಹಿಂದಿನ ಸಿನಿಮಾಗಳಲ್ಲಿ ಇದರ ಬಗ್ಗೆ ತಿಳಿಯದೆ, ಒದ್ದಾಡಿದ್ದು. ನಂತರ ನಮ್ಮೊಂದಿಗೆ ದೀಪಕ್ ಗಂಗಾಧರ್ ಹಾಗೂ ಮಂಜುನಾಥ್ ಡಿ ಸೇರಿದರು. ಎಲ್ಲರೂ ಸೇರಿ ಈ ಸಂಸ್ಥೆ ಆರಂಭಿಸಿದ್ದೇವೆ. ಇದು ಎಲ್ಲರಿಗೂ ಅನುಕೂಲವಾಗಲಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಗೊಂದರಂತೆ ನೂರು ಅಥವಾ ನೂರೈವತ್ತು ಆಸನವುಳ್ಳ ಚಿತ್ರಮಂದಿರ ಆರಂಭಿಸುವ ಯೋಚನೆಯಿದೆ. ಲಾಕ್ ಡೌನ್ ಮುಂಚಿನ ಸಿನಿಮಾ ರಂಗವೇ ಬೇರೆ. ಈಗಲೇ ಬೇರೆ.. ಲಾಕ್ ಡೌನ್ ನಂತರ ಸಿನಿಮಾ ಎನ್ನುವುದು ನಿಮ್ಮ ಮೊಬೈಲ್ ನಲ್ಲಿ ಲಭ್ಯವಿದೆ. ಈಗ ಪೈಪೋಟಿ ಜಾಸ್ತಿಯಾಗಿದೆ. ಜನ ಮೆಚ್ಚುವ ಚಿತ್ರಗಳನ್ನು ನೀಡುವ ಜವಾಬ್ದಾರಿ ಹೆಚ್ಚಿದೆ ಎಂದು ಸತ್ಯಪ್ರಕಾಶ್ ಹೇಳಿದ್ದಾರೆ.

Share Post