BengaluruCinema

ನಟ ಅನಿರುದ್ಧ್‌ ಬಹಿಷ್ಕಾರ ವಿಚಾರ; ನಾಳೆ ಸಂಧಾನ ಸಭೆ

ಬೆಂಗಳೂರು; ಕಿರುತೆರೆಯಲ್ಲಿ ಇತ್ತೀಚೆಗೆ ಹೆಸರು ಮಾಡಿರುವ ನಟ ಅನಿರುದ್ಧ್‌ ಅವರನ್ನು ಕಿರುತೆರೆಯಿಂದ ಬಹಿಷ್ಕರಿಸಲು ಕಿರುತೆರೆ ನಿರ್ಮಾಪಕರ ಸಂಘ ಆಗ್ರಹಿಸಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಾಳೆ ಸಂಧಾನ ಸಭೆ ಕರೆದಿದೆ.

‘ಜೊತೆ ಜೊತೆಯಲಿ’ ಧಾರಾವಾಹಿ ತಂಡದೊಂದಿಗೆ ಜಗಳವಾಡಿಕೊಂಡು ಅನಿರುದ್ಧ ಆ ಸೀರಿಯಲ್‌ನಿಂದ ಹೊರಬಿದ್ದಿದ್ದರು. ಇದೀಗ ಅವರು ಎಸ್‌. ನಾರಾಯಣ್‌ ನಿರ್ದೇಶನದ ಹೊಸ ಧಾರಾವಾಹಿ ‘ಸೂರ್ಯವಂಶ’ದಲ್ಲಿ ನಟಿಸುತ್ತಿದ್ದಾರೆಂಬ ಸುದ್ದಿ ಹರಿದಾಡಿತ್ತು. ಇದಕ್ಕೆ ಫೋಟೋ ಶೂಟ್‌ದ ಕೂಡಾ ನಡೆದಿತ್ತು. ಇದರ ನಡುವೆ ಅನಿರುದ್ಧ ಬಹಿಷ್ಕಾರಕ್ಕೆ ಒತ್ತಡ ಹೆಚ್ಚಾಗಿದೆ.

ಈ ಹಿನ್ನೆಲೆಯಲ್ಲಿ ಮಧ್ಯಪ್ರವೇಶಿಸುವಂತೆ ಅನಿರುದ್ಧ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್‌ ಅವರಿಗೆ ಪತ್ರ ಬರೆದಿದ್ದಾರೆ. ಹೀಗಾಗಿ ಭಾ.ಮ.ಹರೀಶ್‌ ಅವರು ಇಂದು ನಿರ್ಮಾಪಕರ ಸಂಘದ ಸಭೆ ಕರೆದಿದ್ದರು. ಸಭೆಗೆ ಅನಿರುದ್ಧ ಅವರೂ ಬಂದಿದ್ದರು. ಆದರೆ ನಿರ್ಮಾಪಕರ ಸಂಘದ ಪದಾಧಿಕಾರಿಗಳು ಗೈರಾಗಿದ್ದರಿಂದ ಸಭೆಗೆ ನಾಳೆಗೆ ಮುಂದೂಡಲಾಗಿದೆ.

Share Post