Bengaluru

ಜಿಲ್ಲಾಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಪಾಠ; ಜವಾಬ್ದಾರಿ ಅರಿತು ಕೆಲಸ ಮಾಡಲು ಸೂಚನೆ

ಬೆಂಗಳೂರು; ಜಿಲ್ಲಾಧಿಕಾರಿಗಳು ಆಡಳಿತದ ಮುಖ್ಯಭಾಗವಾಗಿದ್ದು, ಜವಾಬ್ದಾರಿ ಅರಿತು ಕೆಲಸ ಮಾಡಬೇಕಾದ ಅವಶ್ಯಕತೆ ಇದೆ ಎಂದು ಜಿಲ್ಲಾಧಿಕಾರಿಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಕಿವಿಮಾತು ಹೇಳಿದ್ದಾರೆ. ವಿಧಾನಸೌಧದಲ್ಲಿ ನಡೆದ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಸಿಎಂ ಬೊಮ್ಮಾಯಿ ಮಾತನಾಡಿದರು.

ಡಿಸಿ ಸ್ಥಾನದಲ್ಲಿರುವವರಲ್ಲಿ ಹೆಚ್ಚಿನವರು ತಮ್ಮ ಅಧಿಕಾರ ವ್ಯಾಪ್ತಿ ಏನಿದೆಯೋ ಅಷ್ಟೇ ಯೋಚಿಸುತ್ತಾರೆ. ಈ ಧೋರಣೆ ಸರಿಯಲ್ಲ. ಜವಾಬ್ದಾರಿ ಮತ್ತು ಆಡಳಿತ ನಿರ್ವಹಣೆಯ ಹೊಣೆಯನ್ನೂ ಅರಿತುಕೊಂಡು ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಡಿಸಿಗಳಿಗೆ ಸೂಚನೆ ನೀಡಿದರು. ಕೆಲಸ ಮಾಡದಿರುವುದಕ್ಕೆ ನೂರೊಂದು ಕಾರಣಗಳು ಸಿಗುತ್ತವೆ. ಆದ್ರೆ ಒಂದು ಕಾರಣವಿದ್ದರೂ ಕೆಲಸ ಮಾಡಬಹುದು ಎಂದು ಸಿಎಂ ಇದೇ ವೇಳೆ ಹೇಳಿದರು. ಯಾವುದೇ ಸಮಸ್ಯೆ ಇರಲಿ, ತ್ವರಿತವಾಗಿ ಕ್ರಮ ಕೈಗೊಂಡರೆ ಜನರಿಗೆ ಅನುಕೂಲವಾಗುತ್ತದೆ ಎಂದೂ ಸಿಎಂ ತಿಳಿಸಿದರು.
ಸಚಿವರಾದ ಆರ್.ಅಶೋಕ್‌, ಜೆ.ಸಿ. ಮಾಧುಸ್ವಾಮಿ, ವಿ.‌ಸುನಿಲ್ ಕುಮಾರ್, ಸಿ.ಸಿ.ಪಾಟೀಲ, ವಿ.ಸೋಮಣ್ಣ ಹಾಗೂ ಬಿ.ಶ್ರೀರಾಮುಲು ಸಭೆಯಲ್ಲಿ ಹಾಜರಿದ್ದರು.

Share Post