BengaluruDistrictsPolitics

ನಾಳೆ ಡಿ.ಕೆ.ಶಿವಕುಮಾರ್‌ ಹುಟ್ಟುಹಬ್ಬ; ಅಜ್ಜಯ್ಯ ಹೇಳಿದಂತೆ ನಾಳೆ ಪ್ರಮಾಣವಚನ ಸ್ವೀಕರಿಸ್ತಾರಾ..?

ಬೆಂಗಳೂರು; ಕಾಂಗ್ರೆಸ್‌ಗೆ ಪ್ರಚಂಡ ಗೆಲುವು ತಂದುಕೊಟ್ಟ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ನಾಳೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅವರು ಅಪಾರವಾಗಿ ನಂಬುವ ದೇವರು ತುಮಕೂರು ಜಿಲ್ಲೆ ನೊಣವಿನ ಕೆರೆಯ ಅಜ್ಜಯ್ಯ. ಕಷ್ಟಕಾಲದಲ್ಲಿ ಅಜ್ಜಯ್ಯ ಕೈಹಿಡಿದಿದ್ದಾರೆ ಎಂದು ಡಿ.ಕೆ.ಶಿವಕುಮಾರ್‌ ನಂಬುತ್ತಾರೆ. ಹೀಗಾಗಿ ಅವರು ಇಂದು ನೊಣವಿನಕೆರೆ ಅಜ್ಜಯ್ಯನ ದರ್ಶನಕ್ಕೆ ಹೋಗಿದ್ದಾರೆ. ಅಂದಹಾಗೆ, ನೀನು ಜನ್ಮದಿನದಂದೇ ಸಿಎಂ ಹುದ್ದೆ ಸ್ವೀಕಾರ ಮಾಡುತ್ತೀಯ ಎಂದು ಈ ಹಿಂದೆ ಅಜ್ಜಯ್ಯ ಹೇಳಿದ್ದರಂತೆ. ಹೀಗಾಗಿ ನಾಳೆ ಡಿ.ಕೆ.ಶಿವಕುಮಾರ್‌ ಸಿಎಂ ಹುದ್ದೆ ಅಲಂಕರಿಸುತ್ತಾರಾ..? ಕಾಂಗ್ರೆಸ್‌ ಹೈಕಮಾಂಡ್‌ ಹುಟ್ಟುಹಬ್ಬದ ಗಿಫ್ಟಾಗಿ ಡಿ.ಕೆ.ಶಿವಕುಮಾರ್‌ಗೆ ಸಿಎಂ ಸ್ಥಾನ ಕೊಡುತ್ತಾ ಎಂಬುದರ ಬಗ್ಗೆ ಕುತೂಹಲ ಕೆರಳಿಸಿದೆ. 

ಇಂದು ಸಂಜೆ ಖಾಸಗಿ ಹೋಟೆಲ್‌ ನಲ್ಲಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಈ ಸಭೆಯಲ್ಲಿ ನೂತನವಾಗಿ ಆಯ್ಕೆಯಾಗಿರುವ ಶಾಸಕರ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತದೆ. ಅನಂತರ ಕಾಂಗ್ರೆಸ್‌ ಹೈಕಮಾಂಡ್‌ ಅಂತಿಮ ನಿರ್ಧಾರ ಮಾಡಿ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲಾಗುತ್ತದೆ. ಅನಂತರ ಶಾಸಕಾಂಗ ಪಕ್ಷದ ನಾಯಕರು ಸರ್ಕಾರ ರಚಿಸುವುದಕ್ಕೆ ರಾಜ್ಯಪಾಲರ ಮುಂದೆ ಹಕ್ಕು ಮಂಡನೆ ಮಾಡಲಿದ್ದಾರೆ. ಹೀಗಾಗಿ ಸಂಜೆ ನಡೆಯುವ ಸಭೆ ಅತ್ಯಂತ ಮಹತ್ವದ್ದು.

ಸಭೆಗೂ ಮುನ್ನ ಡಿ.ಕೆ.ಶಿವಕುಮಾರ್‌ ಅಜ್ಜಯ್ಯನ ದರ್ಶನಕ್ಕೆ ಹೋಗಿದ್ದಾರೆ. ಅಜ್ಜಯ ದರ್ಶನ ಪಡೆದು ಮಧ್ಯಾಹ್ನ ಒಂದು ಗಂಟೆಗೆ ಬೆಂಗಳೂರಿಗೆ ವಾಪಸ್‌ ಬರುತ್ತೇನೆ ಎಂದು ಡಿ.ಕೆ.ಶಿವಕುಮಾರ್‌ ಬೆಂಗಳೂರಿನಲ್ಲಿ ಹೇಳಿದ್ದಾರೆ.

Share Post