Bengaluru

ಪಾಗಲ್‌ ಪ್ರೇಮಿಯಿಂದ ಆಸಿಡ್‌ ದಾಳಿ; ಯುವತಿಗೆ ಗಂಭೀರ ಗಾಯ

ಬೆಂಗಳೂರು: ಪಾಗಲ್‌ ಪ್ರೇಮಿಯೊಬ್ಬ ಪ್ರೀತಿಗೆ ಒಪ್ಪದ ಯುವತಿ ಮೇಲೆ ಆಸಿಡ್‌ ದಾಳಿ ಮಾಡಿರುವ ಘಟನೆ ಸುಂಕದಕಟ್ಟೆಯ ಮುತ್ತೂಟ್‌ ಫಿನ್‌ಕಾರ್ಪ್‌ ಬಳಿ ನಡೆದಿದೆ. ಯುವತಿಗೆ ತೀವ್ರಗಾಯಗಳಾಗಿದ್ದು, ಬೆನ್ನು, ಕತ್ತು ಹಾಗೂ ತಲೆ ಭಾಗ ಬಹುತೇಕ ಸುಟ್ಟಿದೆ ಎಂದು ತಿಳಿದುಬಂದಿದೆ. ಯುವತಿಯನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಹಾಡಹಗಲೇ ಈ ಘಟನೆ ನಡೆದಿದ್ದು, ಆಸ್ಪತ್ರೆ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್‌ ಪಾಟೀಲ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಆಸಿಡ್‌ ದಾಳಿ ಮಾಡಿದ ಯುವಕ ಪರಾರಿಯಾಗಿದ್ದು, ಆತನಿಗಾಗಿ ವಿಶೇಷ ತಂಡ ರಚಿಸಲಾಗಿದೆ ಎಂದು ಡಿಸಿಪಿ ಸಂಜೀವ್‌ ಪಾಟೀಲ್‌ ಹೇಳಿದ್ದಾರೆ.

23 ವರ್ಷದ ಯುವತಿ ಮೇಲೆ ಪಾಗಲ್ ಪ್ರೇಮಿ ನಾಗೇಶ್ ಆ್ಯಸಿಡ್ ದಾಳಿ ಮಾಡುವ ಮೂಲಕ ವಿಕೃತಿ ಮೆರೆದಿದ್ದಾನೆ. ತನ್ನನ್ನು ಪ್ರೀತಿಸುವಂತೆ ನಾಗೇಶ್ ಯುವತಿಯ ಬಿನ್ನು ಬಿದ್ದಿದ್ದ. ಆದರೆ ಈತನ ಪ್ರೀತಿಗೆ ಯುವತಿ ಸೊಪ್ಪು ಹಾಕಲಿಲ್ಲ. ಇದರಿಂದ ಸಿಟ್ಟಿಗೆದ್ದ ನಾಗೇಶ್, ಯುವತಿ ಮೇಲೆ ಆ್ಯಸಿಡ್ ಎರಚಿದ್ದಾನೆ.

ಇಂದು ಬೆಳಗ್ಗೆ ಎಂಟೂವರೆ ಸುಮಾರಿಗೆ ಕೆಲಸಕ್ಕೆಂದು ಯುವತಿಯನ್ನು ಆಕೆಯ ತಂದೆ ಬೈಕ್‍ನಲ್ಲಿ ಕರೆದುಕೊಂಡು ಬಂದು ಮುತ್ತೂಟ್ ಫಿನ್ ಕಾರ್ಪ್ ಬಳಿ ಡ್ರಾಪ್ ಮಾಡಿ ಹೋಗಿದ್ರು. ಯುವತಿ ತಂದೆ ಡ್ರಾಪ್ ಮಾಡಿ ಹೋದ ಕೆಲವೇ ಕ್ಷಣದಲ್ಲಿ ನಾಗೇಶ್ ಆಕೆಯ ಮೇಲೆ ದಾಳಿ ನಡೆಸಿದ್ದಾನೆ.
Share Post