BengaluruPolitics

ನಾನು ಪ್ರೀತಿ ಮಾಡೋದಕ್ಕೂ ರೆಡಿ, ಸಂಘರ್ಷಕ್ಕೂ ರೆಡಿ; ಡಿಸಿಎಂ ಡಿ.ಕೆ.ಶಿವಕುಮಾರ್‌

ಬೆಂಗಳೂರು; ರಾಜಕೀಯ, ಸೈದ್ಧಾಂತಿಕ ಭಿನ್ನಾಭಿಪ್ರಾಯಗಳೆಲ್ಲಾ ಬಿಟ್ಟು ಬೆಂಗಳೂರು ಅಭಿವೃದ್ಧಿಗೆ ಶ್ರಮಿಸೋಣ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ವಿಧಾನಸೌಧದಲ್ಲಿ ನಡೆದ ಬೆಂಗಳೂರು ಶಾಸಕರು, ಸಂಸದರು, ಪರಿಷತ್ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು.

ನಾವೆಲ್ಲರೂ ರಾಜಕೀಯ ಬಿಟ್ಟು ಬೆಂಗಳೂರು ಅಭಿವೃದ್ಧಿಗೆ ಶ್ರಮಿಸೋಣ. ಅಭಿವೃದ್ಧಿ ಬೇಡ ಬರೀ ರಾಜಕೀಯವನ್ನೇ ಮಾಡೋಣ ಎಂದರೆ ಅದಕ್ಕೂ ನಾನು ಸಿದ್ಧನಿದ್ದೇನೆ. ಪ್ರೀತಿಗೂ ರೆಡಿ, ಸಂಘರ್ಷಕ್ಕೂ ನಾನು ರೆಡಿ ಎಂದು ಡಿ.ಕೆ.ಶಿವಕುಮಾರ್‌ ಇದೇ ವೇಳೆ ಹೇಳಿದ್ದಾರೆ. ರಾಜಕೀಯವಾಗಿ ನಮ್ಮ ನಡುವೆ ಸೈದ್ಧಾಂತಿಕ ಭಿನ್ನಾಭಿಪ್ರಾಯ, ವ್ಯತ್ಯಾಸಗಳು ಹಲವಾರು ಇರಬಹುದು. ಅವುಗಳನ್ನೆಲ್ಲಾ ಪಕ್ಕಕ್ಕಿಟ್ಟು ಪಕ್ಷಬೇಧ ಮರೆತು ಎಲ್ಲರೂ ಬೆಂಗಳೂರು ಅಭಿವೃದ್ಧಿಗೆ ಸಲಹೆ ಕೊಡಿ ಎಂದು ಮನವಿ ಮಾಡಿದರು.

ಮಾಜಿ ಪ್ರಧಾನಿ ವಾಜಪೇಯಿಯವರು ಬೆಂಗಳೂರು ನಗರದ ಘನತೆ ಬಗ್ಗೆ ಕೊಂಡಾಡಿದ್ದರು. ವಿಶ್ವಮಟ್ಟದಲ್ಲಿ ಬೆಂಗಳೂರು ಘನತೆ, ಪ್ರಾಮುಖ್ಯತೆ ಬಗ್ಗೆ ಅವರು ಸಾರಿ ಹೇಳಿದ್ದರು. ಹೀಗಾಗಿ ನಾವು, ನೀವೆಲ್ಲಾ ಸೇರಿ ಬೆಂಗಳೂರಿನ ಘನತೆ, ಗೌರವ ಹೆಚ್ಚಿಸೋಣ ಎಂದು ಡಿ.ಕೆ.ಶಿವಕುಮಾರ್‌ ಮನವಿ ಮಾಡಿದರು. ನನಗೆ ದ್ವೇಷದ ರಾಜಕೀಯದಲ್ಲಿ ನಂಬಿಕೆ ಇಲ್ಲ. ನೀವು ನನಗೆ ಸಲಹೆ ಕೊಟ್ಟರೆ ನಿರ್ಮಲ ಮನಸ್ಸಿಂದ ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು.

Share Post