BengaluruPolitics

ನಾಳೆ ನಾವೇ ಪೇಸಿಎಂ ಪೋಸ್ಟರ್‌ ಅಂಟಿಸುತ್ತೇವೆ; ಡಿ.ಕೆ.ಶಿವಕುಮಾರ್‌

ಬೆಂಗಳೂರು; ರಾಜ್ಯ ಸರ್ಕಾರವನ್ನು ನಲವತ್ತು ಪರ್ಸೆಂಟ್‌ ಸರ್ಕಾರ ಎಂದು ನಾವು ಎಲ್ಲಾ ಕಡೆ ಕ್ಯಾಂಪೇನ್‌ ಮಾಡುತ್ತಿದ್ದೇವೆ. ಅದರ ಭಾಗವಾಗಿ ಪೋಸ್ಟರ್‌ಗಳನ್ನು ಅಂಟಿಸಿದ್ದೇವೆ. ಅಧಿಕಾರದಲ್ಲಿರುವವರು ಇದನ್ನು ಡೈಜೆಸ್ಟ್‌ ಮಾಡಿಕೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ನಿನ್ನೆ ಕಾಂಗ್ರೆಸ್‌ ವತಿಯಿಂದ ಪೇಸಿಎಂ ಎಂಬ ಪೋಸ್ಟರ್‌ ಅಂಟಿಸಲಾಗಿತ್ತು. ಆ ಹಿನ್ನೆಲೆಯಲ್ಲಿ ಪೊಲೀಸರು ಇಬ್ಬರು ಕೆಪಿಸಿಸಿ ಜಾಲತಾಣ ವಿಭಾಗದ ಮುಖಂಡರನ್ನು ಬಂಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಡಿ.ಕೆ.ಶಿವಕುಮಾರ್‌ ಅವರು, ಇದೆಲ್ಲವನ್ನು ಅಧಿಕಾರದಲ್ಲಿ ಇರುವವರು ಇದನ್ನು ಡೈಜೆಸ್ಟ್ ಮಾಡಿಕೊಳ್ಳಬೇಕು. ರಾತ್ರೋ ರಾತ್ರಿ ಅರೆಸ್ಟ್ ಮಾಡಿರುವುದನ್ನು ಖಂಡಿಸುತ್ತೇನೆ ಎಂದರು.

ಪ್ರಜಾಪ್ರಭುತ್ವದ ಅಡಿ ನಾವು ಕೆಲಸ ಮಾಡ್ತಿದ್ದೇವೆ. 40 ಪರ್ಸೆಂಟ್‌ ಕಮಿಷನ್ ಸರ್ಕಾರದ ವಿರುದ್ಧ ಅಭಿಯಾನ ಮಾಡುತ್ತಿದ್ದೇವೆ. ಪೇಸಿಎಂನ್ನು 1.9 ಲಕ್ಷ ಜನ  ಡೌನ್ ಲೋಡ್ ಮಾಡಿಕೊಂಡಿದ್ದಾರೆ. ಅದರಲ್ಲಿ 8 ಸಾವಿರ ದೂರು ದಾಖಲಾಗಿದೆ. ಇದು ರಾಜಕಾರಣದ ವ್ಯವಸ್ಥೆ. ನನ್ನ ಹಾಗೂ ಸಿದ್ದರಾಮಯ್ಯ ಫೋಟೋ ಕೂಡ ಅವರು ಪೋಸ್ಟರ್ ಮಾಡಿದ್ದಾರೆ ಎಂದರು.

ನಾಳೆ ಕಾಂಗ್ರೆಸ್‌ನ ಎಲ್ಲ ಎಂಎಲ್ಸಿ, ಎಂಎಲ್‌ಎಗಳು ಸೇರಿ ನಾವೇ ಪೇಸಿಎಂ ಪೋಸ್ಟರ್ ಅಂಟಿಸುತ್ತೇವೆ. ಸರ್ಕಾರಿ ಕಟ್ಟಡಗಳ ಮೇಲೆ ಪೋಸ್ಟರ್ ಅಂಟಿಸುತ್ತೇವೆ ಎಂದು ಡಿ.ಕೆ.ಶಿವಕುಮಾರ್‌ ಇದೇ ವೇಳೆ ತಿಳಿಸಿದ್ದಾರೆ.

 

Share Post