BengaluruPolitics

130 ಕ್ಷೇತ್ರಗಳ ʻಕೈʼ ಅಭ್ಯರ್ಥಿಗಳ ಪಟ್ಟಿ ಸಿದ್ಧ; ಸಿದ್ದು ಪಾಳಯಕ್ಕೆಷ್ಟು..? ಡಿಕೆಶಿ ಪಾಳಯಕ್ಕೆಷ್ಟು..?

ಬೆಂಗಳೂರು;  ಈ ಬಾರಿಯ ವಿಧಾನಸಭಾ ಚುನಾವಣಾ ಅಖಾಡ ಜೋರಾಗಿದೆ.. ಅದ್ರಲ್ಲೂ ಕಾಂಗ್ರೆಸ್‌ನಲ್ಲಿ ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ಮಿತಿಮೀರಿದೆ.. ಯಾರಿಗೆ ಟಿಕೆಟ್‌ ಫೈನಲ್‌ ಮಾಡೋದು ಅನ್ನೋದ್ರ ಬಗ್ಗೆ ಕಾಂಗ್ರೆಸ್‌ ನಾಯಕರು ತಲೆ ಕೆಡಿಸಿಕೊಂಡಿದ್ದಾರೆ.. ಕೆಲವು ಕ್ಷೇತ್ರಗಳಲ್ಲಿ ಇಬ್ಬರು ಮೂವರು ಗೆಲ್ಲೋ ಅಭ್ಯರ್ಥಿಗಳಿದ್ದಾರೆ.. ಅವರಲ್ಲಿ ಒಬ್ಬರಿಗೆ ಮಾತ್ರ ಟಿಕೆಟ್‌ ಕೊಡಬೇಕು… ಯಾರನ್ನಾದರೂ ಒಬ್ಬರನ್ನು ಆಯ್ಕೆ ಮಾಡಿದರೆ ಉಳಿದವರು ಬಂಡಾಯವೇಳುತ್ತಾರೆ… ಹೀಗಾಗಿ ಕಾಂಗ್ರೆಸ್‌ಗೆ ಬಂಡಾಯದ ಬಿಸಿ ತಟ್ಟುವ ಮುನ್ಸೂಚನೆ ಸಿಕ್ಕಿದೆ… ಹಾಗೆ ನೋಡಿದರೆ ಜನವರಿ ಮೊದಲ ವಾರದಲ್ಲೇ ಮೊದಲ ಪಟ್ಟಿಯನ್ನು ರಿಲೀಸ್‌ ಮಾಡಲು ಕಾಂಗ್ರೆಸ್‌ ರೆಡಿಯಾಗಿತ್ತು… ಆದ್ರೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರೋದ್ರಿಂದ ಈಗಲೂ ಅಭ್ಯರ್ಥಿಗಳನ್ನು ಅಂತಿಮಗೊಳಿಸೋದಕ್ಕೆ ಮೀನಾಮೇಷ ಎಣಿಸುತ್ತಿದೆ.. ಈ ನಡುವೆ 130 ಸಂಭಾವಿತ ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್‌ ನಾಯಕರು ಅಂತಿಮ ಮಾಡಿದ್ದಾರೆ.. ಕಷ್ಟನೋ, ಸುಖಾನೋ ಫೆಬ್ರವರಿ ಎರಡನೇ ವಾರದೊಳಗೆ ಒಂದು ಪಟ್ಟಿಯನ್ನು ರಿಲೀಸ್‌ ಮಾಡಲು ಕಾಂಗ್ರೆಸ್‌ ನಾಯಕರು ಕಸರತ್ತು ಮಾಡ್ತಿದ್ದಾರೆ…

ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಬಣಗಳಿವೆ… ಇಬ್ಬರೂ ನಾಯಕರ ಬೆಂಬಲಿಗರು ಟಿಕೆಟ್‌ ಆಕಾಂಕ್ಷಿಗಳಿದ್ದಾರೆ… ಹೀಗಾಗಿ, ಟಿಕೆಟ್‌ ಘೋಷಣೆ ಮಾಡಿದಾಗ ಬಣ ರಾಜಕೀಯವೂ ಹೆಚ್ಚಾಗುವ ಸಾಧ್ಯತೆ ಇದೆ.. ಕಾಂಗ್ರೆಸ್‌ ಪಟ್ಟಿ ಸಿದ್ಧವಾಗದಿರೋದಕ್ಕೆ ಇದೂ ಒಂದು ಕಾರಣ… ಸದ್ಯಕ್ಕೆ ಕಾಂಗ್ರೆಸ್‌ ಚುನಾವಣಾ ಸಮಿತಿ 130 ಕ್ಷೇತ್ರಗಳ ಸಂಭಾವಿತ ಅಭ್ಯರ್ಥಿಗಳ ಪಟ್ಟಿ ರೆಡಿ ಮಾಡಿದೆ.. ಇದ್ರಲ್ಲಿ ಬಹುತೇಕರು ಹಾಲಿ ಶಾಸಕರಿದ್ದಾರೆ.. ಯಾವ ಹಾಲಿ ಶಾಸಕರು ಈ ಬಾರಿ ಚುನಾವಣೆಗೆ ಸ್ಪರ್ಧೆ ಮಾಡಲು ಹಿಂದೇಟು ಹಾಕುತ್ತಿದ್ದಾರೋ ಆ ಕ್ಷೇತ್ರಗಳಲ್ಲಿ ಮಾತ್ರ ಬೇರೊಬ್ಬರನ್ನು ಆಯ್ಕೆ ಮಾಡಲಾಗುತ್ತಿದೆ… ಬುಧವಾರ ಈ ಕುರಿತಾಗಿ ಹೈವೋಲ್ಟೇಜ್‌ ಮೀಟಿಂಗ್‌ ನಡೆಯಲಿದೆ… ಬುಧವಾರ ಮಧ್ಯಾಹ್ನ ರಣದೀಪ್‌ ಸುರ್ಜೇವಾಲಾ ಅವ್ರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.. ಸುರ್ಜೇವಾಲಾ, ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಅವರು ಸಭೆ ನಡೆಸಲಿದ್ದಾರೆ.. ಈ ಸಭೆಯಲ್ಲಿ ಮೊದಲ ಪಟ್ಟಿ ಬಿಡುಗಡೆಗೆ ಸಂಬಂಧಿಸಿದಂತೆ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ.. ಅನಂತರ ಆ ಪಟ್ಟಿಯನ್ನು ಹೈಕಮಾಂಡ್‌ಗೆ ಕಳುಹಿಸಲು ಕಾಂಗ್ರೆಸ್‌ ತೀರ್ಮಾನ ಮಾಡಿದೆ..

ಈ ಬಾರಿ ಕಾಂಗ್ರೆಸ್‌ ಜನಾಭಿಪ್ರಾಯ ಪಡೆದು ಟಿಕೆಟ್‌ಗಳನ್ನು ನೀಡುತ್ತಿದೆ.. ಈಗಾಗಲೇ ವೀಕ್ಷಕರು ಎಲ್ಲಾ ಜಿಲ್ಲೆಗಳು, ಕ್ಷೇತ್ರಗಳನ್ನು ಸುತ್ತಾಡಿದ್ದಾರೆ.. ಸಭೆಗಳನ್ನು ನಡೆಸಿದ್ದಾರೆ… ಕಾಂಗ್ರೆಸ್‌ ಕಾರ್ಯಕರ್ತರ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದಾರೆ.. ಯಾವ ಕ್ಷೇತ್ರದಲ್ಲಿ ಯಾರು ಸ್ಟ್ರಾಂಗ್‌ ಇದ್ದಾರೆ.. ಮತದಾರರ ಒಲವು ಯಾರಿಗೆ ಇದೆ.. ಯಾರಿಗೆ ಟಿಕೆಟ್‌ ಕೊಟ್ಟರೆ ಗೆಲ್ಲುತ್ತಾರೆ… ಈ ಸಂದರ್ಭದಲ್ಲಿ ಬಂಡಾಯ ಎದುರಾದರೆ ಏನು ಮಾಡಬೇಕು.. ಎಂಬುದರ ಕುರಿತಾಗಿ ಅಧ್ಯಯನ ಮಾಡಿದ್ದಾರೆ… ಚುಣಾವಣಾ ಸಮಿತಿ ಎಲ್ಲಾ ಮಾಹಿತಿ ಪಡೆದು ಸಂಭಾವಿತರ ಪಟ್ಟಿಯನ್ನು ಸಿದ್ಧ ಮಾಡಿದ ಎಂದು ತಿಳಿದುಬಂದಿದೆ… ಈ ಬಾರಿ ಹೊಸ ಮುಖಗಳಿಗೆ ಹೆಚ್ಚಿನ ಆಧ್ಯತೆ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ.. ಹೀಗಾಗಿಯೇ ಕಾಂಗ್ರೆಸ್‌ ಪಟ್ಟಿಯ ಬಗ್ಗೆ ಕುತೂಹಲ ಹೆಚ್ಚಾಗಿದೆ…

ಈಗಾಗಲೇ ಜೆಡಿಎಸ್‌ ಅರ್ಧ ಕ್ಷೇತ್ರಗಳ ಪಟ್ಟಿಯನ್ನು ರಿಲೀಸ್‌ ಮಾಡಿದೆ.. ಆದ್ರೆ ಬಿಜೆಪಿ ಕಾದುನೋಡುವ ತಂತ್ರಕ್ಕೆ ಮುಂದಾಗಿದೆ… ಕಾಂಗ್ರೆಸ್‌ ಪಟ್ಟಿಯನ್ನು ನೋಡಿಕೊಂಡು ಬಿಜೆಪಿ ನಾಯಕರು ತಂತ್ರಗಾರಿಕೆ ರೂಪಿಸುವ ಸಾಧ್ಯತೆ ಇದೆ… ಕಾಂಗ್ರೆಸ್‌ನಲ್ಲಿ ಯಾವ ಕ್ಷೇತ್ರದಲ್ಲಿ ಯಾರು ನಿಲ್ಲುತ್ತಿದ್ದಾರೆ.. ಅವರಿಗೆ ಯಾರು ಪ್ರತಿರೋಧ ಒಡ್ಡಬಲ್ಲರು ಎಂಬುದನ್ನು ತೀರ್ಮಾನಿಸಿ, ಬಿಜೆಪಿ ಟಿಕೆಟ್‌ ಅಂತಿಮವಾಗಲಿದೆ.. ಇನ್ನು ಜೆಡಿಎಸ್‌ ನಾಯಕರು ಕಾಂಗ್ರೆಸ್‌ನಲ್ಲಿ ಟಿಕೆಟ್‌ ಸಿಗದವರಿಗೆ ಮಣೆ ಹಾಕಿ ಜೆಡಿಎಸ್‌ಗೆ ಸೆಳೆದು ಸ್ಪರ್ಧಿಗಿಳಿಸಲು ಕಾಯುತ್ತಿದೆ… ಈ ಎಲ್ಲಾ ಕಾರಣದಿಂದ ಕಾಂಗ್ರೆಸ್‌ ನಾಯಕರು ಕೂಡಾ ಭಾರಿ ತಂತ್ರಗಾರಿಕೆ ನಡೆಸುತ್ತಿದ್ದಾರೆ… ಅಭ್ಯರ್ಥಿ ಫೈನಲ್‌ ಆದ ಮೇಲೆ ಇತರೆ ಆಕಾಂಕ್ಷಿಗಳನ್ನು ಕರೆದು ಮಾತನಾಡಲು ನಾಯಕರು ತೀರ್ಮಾನ ಮಾಡಿದ್ದಾರೆ… ಟಿಕೆಟ್‌ ಸಿಗದವರಿಗೆ ಬೇರೆ ರೀತಿಯಲ್ಲಿ ಅಧಿಕಾರ ನೀಡುವ ಭರವಸೆಯನ್ನು ನೀಡಲಾಗುತ್ತಿದೆ… ನಿಗಮ-ಮಂಡಳಿಗಳಿಗೆ ಅಧ್ಯಕ್ಷ ಸ್ಥಾನ ಸೇರಿದಂತೆ ಹಲವು ಹುದ್ದೆಗಳನ್ನು ಟಿಕೆಟ್‌ ವಂಚಿತರಿಗೆ ನೀಡುತ್ತೇವೆಂದು ಕಾಂಗ್ರೆಸ್‌ ನಾಯಕರು ಭರವಸೆ ನೀಡಲಿದ್ದಾರೆ…

ಹಾಲಿ ಶಾಸಕರ ಕ್ಷೇತ್ರದಲ್ಲಿ ಅವರನ್ನೇ ಅಭ್ಯರ್ಥಿಗಳನ್ನು ಮಾಡಲು ಕಾಂಗ್ರೆಸ್‌ ಹೈಕಮಾಂಡ್‌ ತೀರ್ಮಾನ ಮಾಡಿದೆ.. ಆದ್ರೆ ಕೆಲವೊಂದು ಕ್ಷೇತ್ರಗಳಲ್ಲಿ ಹಾಲಿ ಶಾಸಕರು ಈ ಬಾರಿ ಸ್ಪರ್ಧೆ ಮಾಡಲು ಮುಂದೆ ಬರುತ್ತಿಲ್ಲ… ಇನ್ನು ಕೆಲವರಿಗೆ ವಯಸ್ಸಾಗಿದೆ.. ಅಂತಹ ಕ್ಷೇತ್ರಗಳಲ್ಲಿ ಮಾತ್ರ ಬದಲಾವಣೆ ಮಾಡಲಾಗುತ್ತಿದೆ… ಇನ್ನು ಮೂವತ್ತರಿಂದ ನವಲತ್ತು ಕ್ಷೇತ್ರಗಳಲ್ಲಿ ಕಡಿಮೆ ಪೈಪೋಟಿ ಇದೆ.. ಒಂದಿಬ್ಬರು ಮಾತ್ರ ಟಿಕೆಟ್‌ಗಾಗಿ ಲಾಬಿ ಮಾಡುತ್ತಿದ್ದಾರೆ… ಈ ಕ್ಷೇತ್ರಗಳಲ್ಲಿ ಕೊಂಚ ಸುಲಭವಾಗಿ ಅಭ್ಯರ್ಥಿಯನ್ನು ಅಂತಿಮ ಮಾಡಬಹುದು.. ಮೊದಲ ಪಟ್ಟಿಯಲ್ಲಿ ಸುಲಭವಾಗಿ ಆಯ್ಕೆ ಮಾಡುವ ಕ್ಷೇತ್ರಗಳಿಗೆ ಮಾತ್ರ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗುತ್ತದೆ.. ಜೊತೆಗೆ ಹಾಲಿ ಶಾಸಕರಿಗೆ ಟಿಕೆಟ್‌ ಘೋಷಣೆಯಾಗುತ್ತದೆ..

ಮೊದಲಿಗೆ ಸಭೆ ನಡೆಸಿ 130 ಕ್ಷೇತ್ರಗಳಿಗೆ ಸಂಭಾವಿತರನ್ನು ಫೈನಲ್‌ ಮಾಡಲಿರುವ ನಾಯಕರು, ನಂತರ ಆ ಪಟ್ಟಿಯನ್ನು ಹೈಕಮಾಂಡ್‌ಗೆ ಕಳುಹಿಸಲಾಗುತ್ತದೆ.. ಹೈಕಮಾಂಡ್‌ ಆ ಪಟ್ಟಿಗೆ ಅಂತಿಮ ಮುದ್ರೆ ಒತ್ತಿದರೆ ಮಾತ್ರ ಆ ಪಟ್ಟಿಯನ್ನು ರಿಲೀಸ್‌ ಮಾಡಲಾಗುತ್ತದೆ.. ಹೈಕಮಾಂಡ್‌ಗೆ ಕಳುಹಿಸುವ ಪಟ್ಟಿಯಲ್ಲಿ ಸಂಭಾವಿತ ಅಭ್ಯರ್ಥಿಗಳ ಜೊತೆಗೆ ಇತರ ಪ್ರಬಲ ಟಿಕೆಟ್‌ ಆಕಾಂಕ್ಷಿಗಳ ಹೆಸರುಗಳನ್ನು ಕೆಪಿಸಿಸಿಯಿಂದ ಕಳುಹಿಸಲಾಗುತ್ತದೆ.. ಹೈಕಮಾಂಡ್‌ ಅಳೆದೂತೂಗಿ ಪಟ್ಟಿಯನ್ನು ಅಂತಿಮಗೊಳಿಸಲಿದೆ… ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರ್ನಾಟಕದವರೇ ಆದ್ದರಿಂದ ಅವರಿಗೆ ಕರ್ನಾಟಕದ ಎಲ್ಲಾ ಕ್ಷೇತ್ರಗಳ ಬಗ್ಗೆ ಗೊತ್ತಿದೆ.. ಹೀಗಾಗಿ ಹೈಕಮಾಂಡ್‌ ಅಂತಿಮ ಆಯ್ಕೆಗೆ ಮಲ್ಲಿಕಾರ್ಜುನ ಖರ್ಗೆಯವರನ್ನು ಹೆಚ್ಚು ಬಳಸಿಕೊಳ್ಳುವ ಸಾಧ್ಯತೆ ಇದೆ…

ಕೆಲವು ಕ್ಷೇತ್ರಗಳಲ್ಲಿ ಡಿ.ಕೆ.ಶಿವಕುಮಾರ್‌ ಅವರ ಬೆಂಬಲಿಗರು ಟಿಕೆಟ್‌ ಕೇಳುತ್ತಿದ್ದಾರೆ.. ಅಲ್ಲಿ ಸಿದ್ದರಾಮಯ್ಯ ಬೆಂಬಲಿಗರೂ ಟಿಕೆಟ್‌ಗಾಗಿ ಪೈಪೋಟಿ ನಡೆಸುತ್ತಿದ್ದಾರೆ.. ಇಂತಹ ಕ್ಷೇತ್ರಗಳಲ್ಲಿ ಟಿಕೆಟ್‌ ಅಂತಿಮ ಮಾಡೋದು ಕಷ್ಟ ಕಷ್ಟ.. ಹೀಗಾಗಿ ಅಂತಹ ತೊಂಬತ್ತಕ್ಕೂ ಹೆಚ್ಚು ಕ್ಷೇತ್ರಗಳಿಗೆ ಟಿಕೆಟ್‌ ನೀಡುವ ಬಗ್ಗೆ ಹೈಕಮಾಂಡ್‌ಗೆ ಸಂಕಷ್ಟ ಎದುರಾಗಿದೆ.. ಈ ಕ್ಷೇತ್ರಗಳಿಗೆ ಅಂತಿಮ ಕ್ಷಣದಲ್ಲಿ ಟಿಕೆಟ್‌ ಘೋಷಣೆಯಾಗುವ ಸಾಧ್ಯತೆಯೇ ಹೆಚ್ಚಿದೆ.. ಬಂಡಾಯ ಶಮನ ಮಾಡಿ ಅನಂತರ ಟಿಕೆಟ್‌ ಘೋಷಿಸುವ ಸಾಧ್ಯತೆಯೇ ಹೆಚ್ಚಿದೆ…

Share Post