Bengaluru

ವಿಮ್ಸ್‌ನಲ್ಲಿ ಮೂವರು ರೋಗಿಗಳ ಸಾವು ಪ್ರಕರಣ; ಸರ್ಕಾರಕ್ಕೆ ಕಾಂಗ್ರೆಸ್‌ ತರಾಟೆ

ಬೆಂಗಳೂರು; ಬಳ್ಳಾರಿಯ ವಿಮ್ಸ್‌ನಲ್ಲಿ ವಿದ್ಯುತ್‌ ಕೈಕೊಟ್ಟು ವೆಂಟಿಲೇಟರ್‌ನಲ್ಲಿದ್ದ ಮೂವರು ಸಾವನ್ನಪ್ಪಿದ ಪ್ರಕರಣ ವಿಧಾನಸಭೆಯಲ್ಲಿ ಪ್ರತಿಧ್ವನಿಸಿತು. ಈ ಬಗ್ಗೆ ವಿಪಕ್ಷ ಕಾಂಗ್ರೆಸ್‌ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ತು. ಸರ್ಕಾರವೇ ನಿರ್ಲಕ್ಷ್ಯದಿಂದ ರೋಗಿಗಳನ್ನು ಕೊಲೆ ಮಾಡಿದೆ ಎಂದು ಕಾಂಗ್ರೆಸ್‌ ನಾಯಕರು ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ಕಾಂಗ್ರೆಸ್‌ ಈ ಬಗ್ಗೆ ಟ್ವೀಟ್‌ ಕೂಡಾ ಮಾಡಿದ್ದು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ʻಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ವಿದ್ಯುತ್ ಅಭಾವದಿಂದ ವೆಂಟಿಲೇಟರ್‌ನಲ್ಲಿದ್ದ ರೋಗಿಗಳು ಸಾವಿಗೀಡಾಗಿರುವುದು ಬಿಜೆಪಿ ಸರ್ಕಾರ ಮಾಡಿದ ಕೊಲೆʼ ಎಂದು ಕಾಂಗ್ರೆಸ್‌ ಆರೋಪಿಸಿದೆ. ‘ಆಸ್ಪತ್ರೆಯಲ್ಲಿ ಜನರೇಟರ್ ವ್ಯವಸ್ಥೆಯೂ ಇರಲಿಲ್ಲವೇ? ಆರೋಗ್ಯ ಸಚಿವ ಸುಧಾಕರ್‌ ಎಂಬ ಅಸಮರ್ಥ ಸಚಿವರ ಕೈಯ್ಯಲ್ಲಿ ರಾಜ್ಯದ ಆರೋಗ್ಯ ವ್ಯವಸ್ಥೆ ಅನಾರೋಗ್ಯ ಪೀಡಿತವಾಗಿರುವುದು ಕೋವಿಡ್ ಕಾಲದಿಂದಲೂ ಸಾಬೀತಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ವಿಮ್ಸ್‌ನಲ್ಲಿ ಬುಧವಾರ ಬೆಳಗ್ಗೆ ಮೂವರು ರೋಗಿಗಳು ಮೃತಪಟ್ಟಿದ್ದರು. ‘ಕರೆಂಟ್‌ ಕೈಕೊಟ್ಟಿದ್ದಕ್ಕೂ ಸಾವಿಗೂ ಸಂಬಂಧವಿಲ್ಲ’ ಎಂದು ವಿಮ್ಸ್‌ ಮೂಲಗಳು ತಿಳಿಸಿವೆ. ಆದರೆ, ವಿದ್ಯುತ್‌ ಇಲ್ಲದೇ, ವೆಂಟಿಲೇಟರ್‌ ಸ್ಥಗಿತಗೊಂಡು ರೋಗಿಗಳು ಮೃತಪಟ್ಟಿದ್ದಾರೆ ಎಂದು ಅವರ ಸಂಬಂಧಿಕರು ಆರೋಪಿಸಿದ್ದಾರೆ.

Share Post