Bengaluru

ರಮ್ಯಾ ವಿರುದ್ಧ ಕಾಂಗ್ರೆಸ್‌ ಟ್ವೀಟ್‌ ಸಮರ; ಗುಡ್‌ ಕಾಪಿ ಪೇಸ್ಟ್‌ ಎಂದ ಮಾಜಿ ಸಂಸದೆ

ಬೆಂಗಳೂರು; ಡಿ.ಕೆ.ಶಿವಕುಮಾರ್‌ ಹೇಳಿಕೆಗೆ ಪ್ರತಿಯಾಗಿ ಟ್ವೀಟ್‌ ಮಾಡಿ ಚರ್ಚೆಗೆ ಗ್ರಾಸವಾಗಿರುವ ಮಾಜಿ ಸಂಸದೆ ರಮ್ಯಾ ವಿರುದ್ಧ ಡಿಕೆಶಿ ಬೆಂಬಲಿಗರು ಟ್ವೀಟ್‌ ಸಮರ ಶುರು ಮಾಡಿದ್ದಾರೆ. ಕೆಪಿಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಅಧ್ಯಕ್ಷ ಬಿ.ಆರ್. ನಾಯ್ಡು, ರಮ್ಯಾ ಅವರೇ ನಿಮಗೆ ಇವಾಗ ಎಚ್ಚರವಾಯಿತಾ? ಇಷ್ಟು ದಿನ ಎಲ್ಲಿದ್ದಿರಿ? ನಟ ಅಂಬರೀಷ್‌ ನಿಧನರಾಗಿದ್ದಾಗ ಕೂಡಾ ನೀವು ಬಂದಿರಲಿಲ್ಲ. ದಯವಿಟ್ಟು ಇದನ್ನು ಮಂಡ್ಯದ ಮತದಾರರಿಗೆ ತಿಳಿಸುವಿರಾ? ಎಂದು ಕೇಳಿದ್ದರು. ಇದಕ್ಕೆ ರಮ್ಯಾ ಕಿಚಾಯಿಸುವ ರೀತಿಯಲ್ಲಿ ಉತ್ತರಿಸಿದ್ದಾರೆ.

ಬಿ.ಆರ್‌.ನಾಯ್ಡು ಟ್ವೀಟ್‌ನ್ನು ರಿಟ್ವೀಟ್‌ ಮಾಡಿರುವ ರಮ್ಯಾ ‘ಗುಡ್ ಕಾಪಿ ಪೇಸ್ಟ್ ಜಾಬ್’ ಎಂದು ಕಿಚಾಯಿಸಿದ್ದಾರೆ. ಅಂದ್ಹಾಗೆ ಎರಡು ದಿನದ ಹಿಂದೆ ಮಾತನಾಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಪಿಎಸ್‌ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್ ಹಾಗೂ ಸಚಿವ ಅಶ್ವತ್ಥ್ ನಾರಾಯಣ್ ಅವರು ಗೌಪ್ಯವಾಗಿ ಭೇಟಿಯಾಗಿದ್ದರು’ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ರಮ್ಯಾ, ‘ಬೇರೆ ಬೇರೆ ಪಕ್ಷಗಳ ನಾಯಕರು ಭೇಟಿಯಾಗುವುದು ಸಹಜ, ಪರಸ್ಪರ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾರೆ. ಬೇರೆ ಬೇರೆ ಪಕ್ಷಗಳ ನಾಯಕರ ಕುಟುಂಬಗಳ ನಡುವೆ ಮದುವೆ ಸಂಬಂಧಗಳು ಏರ್ಪಟ್ಟಿವೆ. ಹಾಗಿರುವಾಗ, ಕಾಂಗ್ರೆಸ್‌ನ ಹಿರಿಯ ನಾಯಕ ಎಂ.ಬಿ. ಪಾಟೀಲ್ ಮತ್ತು ಅಶ್ವತ್ಥ ನಾರಾಯಣ ಅವರ ಭೇಟಿ ಬಗ್ಗೆ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿರುವುದು ಅಚ್ಚರಿ ಎನಿಸುತ್ತಿದೆ. ಇವುಗಳನ್ನೆಲ್ಲ ಬಿಟ್ಟು ಕಾಂಗ್ರೆಸ್ ಪಕ್ಷದ ನಾಯಕರು ಒಗ್ಗಟ್ಟಾಗಿ ಚುನಾವಣೆ ಎದುರಿಸಬಾರದೇ?’ ಎಂದಿದ್ದರು.

Share Post