Bengaluru

ಸರ್ಕಾರದ ಹಣದಲ್ಲಿ ಕೆಂಪೇಗೌಡ ಪ್ರತಿಮೆ ನಿರ್ಮಿಸಿದ್ದು ಅಪರಾಧ; ಡಿಕೆಶಿ

ಬೆಂಗಳೂರು; ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಡಪ್ರಭು ಕೆಂಪೇಗೌಡ ಅವರ 108 ಅಡಿ ಪ್ರತಿಮೆ ಸ್ಥಾಪಿಸಲು ಸರ್ಕಾರದ ಹಣ ಬಳಸಿದ್ದು ಏಕೆ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಪ್ರಶ್ನೆ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ಇದೊಂದು ದೊಡ್ಡ ಅಪರಾಧ ಎಂದಿದ್ದಾರೆ.

ನಾಳೆ ಪ್ರಧಾನಿ ನರೇಂದ್ರ ಮೋದಿ ಅವರು ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆ ಅನಾವರಣಗೊಳಿಸಲಿದ್ದಾರೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ವಹಿಸುತ್ತಿರುವ ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್(ಬಿಐಎಎಲ್) ಈ ಪ್ರತಿಮೆಯ ಕಾಮಗಾರಿಯನ್ನು ಕೈಗೆತ್ತಿಕೊಂಡು ಪೂರ್ಣಗೊಳಿಸಬೇಕಿತ್ತು ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಸರ್ಕಾರದಿಂದ ವಿಮಾನ ನಿಲ್ದಾಣಕ್ಕೆ ಭೂಮಿ, ಹಣ ಮತ್ತು ಇತರ ಸೌಲಭ್ಯಗಳನ್ನು ನೀಡಲಾಗಿದೆ. ಇದರಿಂದ ಆದಾಯ ಗಳಿಸುತ್ತಿರುವ ಬಿಐಎಎಲ್ ಗೆ ಹೇಳಿದ್ದರೆ ಅವರೇ ಪ್ರತಿಮೆ ನಿರ್ಮಾಣ ಮಾಡುತ್ತಿದ್ದರು. ಆದರೆ ಸರ್ಕಾರ ದುಡ್ಡು ಹಾಕಿದ್ದು ಯಾಕೆ? ಎಂದಿರುವ ಡಿ.ಕೆ.ಶಿವಕುಮಾರ್‌, ಈ ವಿಚಾರವಾಗಿ ನಾನು ಶಂಕುಸ್ಥಾಪನೆ ದಿನವೇ ಪ್ರಶ್ನಿಸಿದ್ದೇ ಎಂದು ಹೇಳಿದ್ದಾರೆ.

ಈ ಯೋಜನೆ ಪ್ರತಿಮೆಯ ಜೊತೆಗೆ 23 ಎಕರೆ ಪ್ರದೇಶದಲ್ಲಿ ಹೆರಿಟೇಜ್ ಥೀಮ್ ಪಾರ್ಕ್ ನಿರ್ಮಾಣ ಮಾಡಲಾಗಿದೆ. ಇದಕ್ಕಾಗಿ ರಾಜ್ಯ ಸರ್ಕಾರ 84 ಕೋಟಿ ರೂಪಾಯಿ ವೆಚ್ಚ ಮಾಡಿದೆ. ಸರ್ಕಾರದ ಹಣವನ್ನು ಬಳಸಿ ಪ್ರತಿಮೆ ಮಾಡುವುದು ದೊಡ್ಡ ಅಪರಾಧ ಎಂದು ಹೇಳಿದ್ದಾರೆ.

Share Post