BengaluruPolitics

ಯಾವ ಆಧಾರದಲ್ಲಿ ಹಂಗಾಮಿ ಅಧ್ಯಕ್ಷರನ್ನು ಮಾಡಿದ್ದೀರಿ..?; ಸಿ.ಎಂ.ಇಬ್ರಾಹಿಂ ಪ್ರಶ್ನೆ

ಬೆಂಗಳೂರು; ಯಾವ ಆಧಾರದಲ್ಲಿ ಕುಮಾರಸ್ವಾಮಿಯವರನ್ನು ಜೆಡಿಎಸ್‌ ಹಂಗಾಮಿ ಅಧ್ಯಕ್ಷರನ್ನಾಗಿ ಮಾಡಿದ್ದೀರಿ ಎಂದು ಜೆಡಿಎಸ್‌ ಉಚ್ಚಾಟಿತ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಪ್ರಶ್ನೆ ಮಾಡಿದ್ದಾರೆ. ಇಂದು ಬೆಂಗಳೂರಿನಲ್ಲಿ ನಡೆದ ಜೆಡಿಎಸ್‌ ಕೋರ್‌ ಕಮಿಟಿ ಸಭೆಯಲ್ಲಿ ಜೆಡಿಎಸ್‌ ರಾಜ್ಯಾಧ್ಯಕ್ಷರಾಗಿದ್ದ ಸಿ.ಎಂ.ಇಬ್ರಾಹಿಂ ಅವರನ್ನು ಉಚ್ಚಾಟಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ಈ ಪ್ರಶ್ನೆ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿರುವ ಸಿ.ಎಂ.ಇಬ್ರಾಹಿಂ ಅವರು, ಜೆಡಿಎಸ್‌ ಪದಾಧಿಕಾರಿಗಳನ್ನು ವಿಸರ್ಜನೆ ಮಾಡಿರುವುದು ತಪ್ಪು. ಆದೇಶ ವಾಪಸ್‌ ಪಡೆಯಬೇಕು. ಪಕ್ಷದ ಸಭೆ ಕರೆಯಬೇಕು ಎಂದು ಜೆಡಿಎಸ್‌ ದೇವೇಗೌಡರನ್ನು ಆಗ್ರಹಿಸಿದ್ದಾರೆ. ದೇವರು ಹಾಗೂ ಜನ ನನ್ನ ಕೈ ಹಿಡಿಯುತ್ತಾರೆ ಎಂಬ ನಂಬಿಕೆ ನನಗಿದೆ. ನಾನು ಪ್ರಚಾರಕ್ಕೆ ಹೋಗದೇ ಇದ್ದರೆ ಚನ್ನಪಟ್ಟಣದಲ್ಲಿ ಹೆಚ್​ಡಿ ಕುಮಾರಸ್ವಾಮಿ ಗೆಲ್ಲುತ್ತಿದ್ದರಾ? ಎಂದು ಇಬ್ರಾಹಿಂ ಪ್ರಶ್ನೆ ಮಾಡಿದ್ದಾರೆ.

ಯಾವ ಒಕ್ಕಲಿಗ ನಾಯಕರನ್ನು ಬೆಳೆಸಿದ್ದೀರಿ ನೀವು..? ಎಂದು ದೇವೆಗೌಡರನ್ನು ಪ್ರಶ್ನೆ ಮಾಡಿರುವ ಇಬ್ರಾಹಿಂ,  ಇಷ್ಟು ದೊಡ್ಡ ವಯಸ್ಸಿನಲ್ಲಿ ನಿಮ್ಮಿಂದ ಇದನ್ನು ನಿರೀಕ್ಷೆ ಮಾಡಿರಲಿಲ್ಲ ಎಂದಿದ್ದಾರೆ. ಮುಂದಿನ ದಿನಗಳಲ್ಲಿ ನಾನು ಹಾಸನ, ಮಂಡ್ಯ, ಹೊಳೆನರಸೀಪುರದಲ್ಲಿ ಸಭೆಗಳನ್ನು ನಡೆಸುತ್ತೇವೆ. ನನ್ನ ಜೊತೆ ಜನ ಇದ್ದಾರೆ ಎಂದು ಹೇಳಿದ್ದಾರೆ.

Share Post