BengaluruCrime

19 ಪ್ರಶ್ನೆ ಕೇಳಿದ ರೂಪಾಗೆ ಸಿಂಧೂರಿ ಅಭಿಮಾನಿಗಳಿಂದ 9 ಪ್ರಶ್ನೆ

ಬೆಂಗಳೂರು; ಮಹಿಳಾ ಐಪಿಎಸ್‌ ಹಾಗೂ ಐಎಎಸ್‌ ಅಧಿಕಾರಿಗಳಿಬ್ಬರ ಜಗಳ ತಾರಕಕ್ಕೇರಿದೆ. ಐಪಿಎಸ್‌ ಅಧಿಕಾರಿ ರೂಪಾ ಅವರು ರೋಹಿಣಿ ಸಿಂಧೂರಿಯವರಿಗೆ 19 ಪ್ರಶ್ನೆ ಕೇಳಿದ್ದರು. ಇದೀಗ ರೋಹಿಣಿ ಸಿಂಧೂರಿ ಅಭಿಮಾನಿಗಳು ರೂಪಾಗೆ 9 ಪ್ರಶ್ನೆ ಹಾಕಿದ್ದಾರೆ. ರೋಹಿಣಿ ಸಿಂಧೂರಿ ಆರ್ಗನೈಜೇಷನ್‌ ಖಾತೆಯಿಂದ ಉತ್ತರಕೊಡಿರೂಪಾವ್ರೇ ಎಂಬ ಹ್ಯಾಶ್‌ ಟ್ಯಾಗ್‌ ಬಳಸಿ ಟ್ವೀಟ್‌ ಮಾಡಲಾಗಿದೆ.

ಟ್ವೀಟ್‍ನಲ್ಲಿ ಕೇಳಲಾದ 9 ಪ್ರಶ್ನೆಗಳು;
ಪ್ರಶ್ನೆ- 1
ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ ರೋಹಿಣಿ ಸಿಂಧೂರಿ ಅವರದ್ದು ಏನೂ ತಪ್ಪಿಲ್ಲ ಎಂದು ಈಗಾಗಲೇ ಎಲ್ಲರಿಗೂ ತಿಳಿದಿದ್ದು, ಮತ್ತೆ ಮತ್ತೆ ನೀವು ಅವರ ಮೇಲೆ ಆರೋಪ ಹೊರಿಸುತ್ತಿರುವುದು ಏಕೆ ಡಿ. ರೂಪಾರವರೇ?

ಪ್ರಶ್ನೆ -2
ಹಿರಿಯ ಐಪಿಎಸ್ ಅಧಿಕಾರಿಯಾದ ತಮ್ಮ ಗಮನಕ್ಕೆ ಈ ಆದೇಶ ಬಂದಿಲ್ಲವೇ ಡಿ. ರೂಪಾರವರೇ?

ಪ್ರಶ್ನೆ-3
ತಮ್ಮ ಟ್ವೀಟ್‍ನಲ್ಲಿ ಶಿಲ್ಪಾನಾಗ್ ಅವರನ್ನು ‘ಕನ್ನಡತಿ’ ಎಂದು ಹೈಲೈಟ್ ಮಾಡಿರುವ ತಾವು, ಸಿಂಧೂರಿಯವರು ಎಂದಾದರೂ ಕನ್ನಡಿಗರನ್ನು ದ್ವೇಷಿಸಿದ್ದನ್ನು ನೋಡಿದ್ದೀರಾ? ಅವರು ಯಾವುದೇ ವೇದಿಕೆ ಮೇಲೆ ತೆಲುಗಿನಲ್ಲಿ ಭಾಷಣ ಮಾಡಿದ್ದನ್ನು ನೋಡಿದ್ದೀರಾ?

ಪ್ರಶ್ನೆ -4
ತಾವು ನಿನ್ನೆ ಪಬ್ಲಿಕ್‍ಟಿವಿಯೊಂದಿಗೆ ಮಾತನಾಡುವಾಗ ‘ರೋಹಿಣಿಗೂ ನನಗೂ ಹೋಲಿಸಬೇಡಿ ಎಂದಿದ್ರಿ, ಇಷ್ಟೆಲ್ಲಾ ನಡೆದರೂ ‘ಎಂದಿನಂತೆ ಶ್ರದ್ಧೆಯಿಂದ ಕೆಲಸ ಮಾಡ್ತೀನಿ’ ಎನ್ನುವ ಅವರೆಲ್ಲಿ.? ಮಾಧ್ಯಮಗಳ ಗಮನ ತಮ್ಮೆಡೆಗೆ ಪ್ರಯತ್ನಿಸುತ್ತಿರುವ ನೀವೆಲ್ಲಿ?

ಪ್ರಶ್ನೆ -5
ಮೈಸೂರಿನ ಡಿಸಿ ನಿವಾಸದ ಈಜುಕೊಳ ನಿರ್ಮಾಣದ ಯೋಜನೆ ಮತ್ತು ಯೋಚನೆ ಎರಡು ನನ್ನದಲ್ಲ ಎಂದು ಸಿಂಧೂರಿಯವರು ಸ್ಪಷ್ಟಪಡಿಸಿದ್ದು ತಮ್ಮ ಗಮನಕ್ಕೆ ಬಂದಿಲ್ಲವೇ ಮೇಡಂ?

ಪ್ರಶ್ನೆ -6
ಗಾಯಕ ಲಕ್ಕಿ ಅಲಿ ಜಮೀನಿಗೂ ಮತ್ತು ನನಗೂ ಯಾವುದು ಸಂಬಂಧ ಇಲ್ಲ ಎಂದು ಸಿಂಧೂರಿಯವರು ಸ್ಪಷ್ಟಪಡಿಸಿದ್ದಾರೆ, ಅವರ ಕುಟುಂಬದ ಯಾರ ಮೇಲೆ ಆರೋಪ ಬಂದರೂ, ಸಿಂಧೂರಿಯವರ ಮೇಲೆ ನೇರ ಆರೋಪ ಹೊರಿಸುವುದು ಏಕೆ?

ಪ್ರಶ್ನೆ -7
ಎಲ್ಲಾ ಕನ್ನಡಿಗರಿಗೆ ತಮ್ಮ ಮೇಲೆ ಅಪಾರ ಗೌರವವಿದೆ, ಕನ್ನಡದ ಎಲ್ಲಾ ಹೆಣ್ಣು ಮಕ್ಕಳಿಗೆ ತಾವೇ ದೊಡ್ಡ ಸ್ಪೂರ್ತಿ, ಇದರ ನಡುವೆ ಕರ್ನಾಟಕ ಸರ್ಕಾರದ ಹಿರಿಯ, ಮಹಿಳಾ ಅಧಿಕಾರಿಯನ್ನು ಬೇರೆ ರಾಜ್ಯದವರು ಎಂದು ಹೇಳಿ ನೋವುಂಟು ಮಾಡುವುದು ಸರಿಯೇ? ಬೇರೆ ರಾಜ್ಯಗಳಲ್ಲಿ ಕನ್ನಡಿಗರು ಯಾರು ಸೇವೆ ಸಲ್ಲಿಸುತ್ತಿಲ್ಲವೇ?

ಪ್ರಶ್ನೆ -8
ಸಿಂಧೂರಿಯವರು ಕರ್ನಾಟಕಕ್ಕೆ ಬಂದ ಆರೇ ತಿಂಗಳಲ್ಲಿ ಕನ್ನಡವನ್ನು ಸ್ಪಷ್ಟವಾಗಿ ಮಾತನಾಡುವುದನ್ನು ಕಲಿತಿದ್ದಾರೆ, ಅವರು ತಮ್ಮ ಕಚೇರಿ ವೇಳೆಯಲ್ಲಿ ಎಂದಾದರೂ ಕನ್ನಡಿಗರನ್ನು ಕಡೆಗಣಿಸಿರುವುದು ತಮ್ಮ ಗಮನಕ್ಕೆ ಬಂದಿದೆಯೇ?

ಪ್ರಶ್ನೆ-9
ರೋಹಿಣಿ ಅವರ ಮೇಲೆ ಯಾವುದೇ ಆರೋಪ ಇದ್ದರೂ, ಅದನ್ನು ನೇರವಾಗಿ ಚೀಫ್ ಸೆಕ್ಯೂರೆಟರಿ ಆಫ್ ಕರ್ನಾಟಕ ಹಾಗೂ ಡಿಜಿಪಿ ರವರ ಗಮನಕ್ಕೆ ತರದೆ, ವಾಟ್ಸಪ್ ಸ್ಕ್ರೀನ್‍ಶಾಟ್‍ಗಳಲ್ಲಿ ತೆಗೆದ ಅವರ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದು ಸರಿಯೇ? ಎಂದು ಪ್ರಶ್ನಿಸಿದ್ದಾರೆ.

Share Post