CrimeDistricts

ಪ್ರವೀಣ್‌ ಹತ್ಯೆ ಪ್ರಕರಣ; ಯಾವುದೇ ಕಠಿಣ ಕ್ರಮಕ್ಕೂ ಸರ್ಕಾರ ಸಿದ್ಧ – ಸಚಿವ ಅಶ್ವತ್ಥನಾರಾಯನ

ರಾಮನಗರ; ಅಮಾಯಕರ ಜೀವ ರಕ್ಷಣೆ ಸರ್ಕಾರದ ಕರ್ತವ್ಯ. ಕೊಲೆಗಡುಕರನ್ನು ಎನ್‌ಕೌಂಟರ್‌ ಸೇರಿದಂತೆ ಯಾವುದೇ ಕಠಿಣ ಕ್ರಮಕ್ಕೆ ನಮ್ಮ ಸರ್ಕಾರ ಸಿದ್ಧವಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ತಿಳಿಸಿದ್ದಾರೆ. ರಾಮನಗರದಲ್ಲಿ ಗಾಳಿಪಟ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಯಾವ ಕಾರಣಕ್ಕೂ ಕೊಲೆಗಡುಕರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆದ ಕೊಲೆಗಳ ಬಗ್ಗೆ ಈಗಾಗಲೇ ತೀವ್ರ ತನಿಖೆ ನಡೆಯುತ್ತಿದೆ. ಹಲವು ತಂಡಗಳು ಇದರಲ್ಲಿ ಕಾರ್ಯನಿರತವಾಗಿವೆ. ಅಮಾಯಕರ ಜೀವ ರಕ್ಷಣೆ ನಮ್ಮ‌ ಕರ್ತವ್ಯ ಎಂದು ಸಚಿವ ಅಶ್ವತ್ಥನಾರಾಯಣ ಹೇಳಿದರು.

ಬಿಜೆಪಿ ಕಾರ್ಯಕರ್ತರ ಆಕ್ರೋಶ ಈ ಸಂದರ್ಭದಲ್ಲಿ ಸಹಜ. ಈಗಾಗಲೇ ಸಂಬಂಧಿಸಿದವರನ್ನು ಬಂಧಿಸಲಾಗಿದೆ. ಸರ್ಕಾರ ಹಾಗೂ ಗೃಹ ಸಚಿವರು ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜನರ ಭಾವನೆಗಳಿಗೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತೇವೆ. ಯು.ಪಿ. ಮಾದರಿ ಅಲ್ಲ, ಅದಕ್ಕಿಂತ ಐದು ಹೆಜ್ಜೆ ಮುಂದೆ ಹೋಗಿ ಕ್ರಮ ಕೈಗೊಳ್ಳುತ್ತೇವೆ ಎಂದರು.

Share Post