BengaluruPolitics

ರಾಜ್ಯಸಭಾ ಚುನಾವಣೆ; ದಳಪತಿಗಳಿಂದ ಕೊನೇ ಕ್ಷಣದ ತಂತ್ರ

ಬೆಂಗಳೂರು; ರಾಜ್ಯಸಭಾ ಚುನಾವಣೆಗೆ ಒಂದು ದಿನ ಮಾತ್ರ ಬಾಕಿ ಇದೆ. ಹೀಗಾಗಿ ಜೆಡಿಎಸ್‌ ನಾಯಕರು ಕಾಂಗ್ರೆಸ್‌ ಮನವೊಲಿಸಲು ಕೊನೇ ಕ್ಷಣದ ಕಸರತ್ತು ನಡೆಸುತ್ತಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿಯವರು ಕಾಂಗ್ರೆಸ್‌ ರಾಷ್ಟ್ರೀಯ ನಾಯಕರ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ದೂರವಾಣಿ ಮೂಲಕ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಸುರ್ಜೇವಾಲಾ ಸೇರಿದಂತೆ ಹಲವು ನಾಯಕರನ್ನು ಸಂಪರ್ಕಿಸಿ ಜೆಡಿಎಸ್‌ ಬೆಂಬಲಿಸುವಂತೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ದಾರೆ. ಇದರ ಜೊತೆ ಸರಣಿ ಟ್ವೀಟ್‌ ಕೂಡಾ ಮಾಡಿದ್ದಾರೆ.

ನಮ್ಮ ಅಭ್ಯರ್ಥಿ ಕುಪೇಂದ್ರ ರೆಡ್ಡಿಯವರಿಗೆ ರಾಜ್ಯಸಭಾ ಸದಸ್ಯರಾಗಿ ಅನುಭವ ಇದೆ. ಹೀಗಾಗಿ, ನಮ್ಮ ಅಭ್ಯರ್ಥಿಗೇ ಕಾಂಗ್ರೆಸ್‌ ಪೂರ್ಣ ಬೆಂಬಲ ನೀಡಲಿ. ಜನ ಗಮನಿಸುತ್ತಿದ್ದಾರೆ. ಹೀಗಾಗಿ ಸುರ್ಜೇವಾಲಾ ಅವರು ಇದನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕು ಎಂದೂ ಕುಮಾರಸ್ವಾಮಿ ಟ್ವೀಟ್‌ನಲ್ಲಿ ಹೇಳಿದ್ದಾರೆ. ಇನ್ನು ಜೆಡಿಎಸ್‌ ಶಾಸಕರು ನಿನ್ನೆ ಸಂಜೆಯೇ ಹೋಟೆಲ್‌ಗೆ ಶಿಫ್ಟ್‌ ಆಗಿದ್ದರು. ವೈಟ್‌ಫೀಲ್ಡ್‌ನ ಹೋಟೆಲ್‌ ಒಂದರಲ್ಲಿ ಕುಮಾರಸ್ವಾಮಿ ಸಮೇತ ಎಲ್ಲಾ ಶಾಸಕರು ವಾಸ್ತವ್ಯ ಹೂಡಿದ್ದರು. ಇದೀಗ ಜೆಡಿಎಸ್‌ ಶಾಸಕರನ್ನು ಯಶವಂತಪುರಕ್ಕೆ ಶಿಫ್ಟ್‌ ಮಾಡಲಾಗಿದೆ. ಯಶವಂತಪುರದ ತಾಜ್‌ ವಿವಾಂತ ಹೋಟೆಲ್‌ಗೆ ವಾಸ್ತವ್ಯ ಬದಲಿಸಲಾಗಿದೆ. ಸಂಜೆ ಜೆಡಿಎಲ್‌ಪಿ ಮೀಟಿಂಗ್‌ ಇರುವ ಕಾರಣದಿಂದಾಗಿ ಇಲ್ಲಿಗೆ ಶಿಫ್ಟ್‌ ಮಾಡಲಾಗಿದೆ.

Share Post