Bengaluru

ಪೊಲೀಸರ ಸೋಗಿನಲ್ಲಿ ಸ್ಪಾ ಮೇಲೆ ದಾಳಿ; ಲಕ್ಷಾಂತರ ರೂ. ವಂಚಿಸಿದ್ದ ಆರೋಪಿಗಳು ಅರೆಸ್ಟ್‌

ಬೆಂಗಳೂರು: ಪೊಲೀಸರೆಂದು ಹೇಳಿಕೊಂಡು ಹೋಗಿ ಸ್ಪಾ ಒಂದರ ಮಾಲೀಕರಿಂದ ಲಕ್ಷಾಂತರ ರೂಪಾಯಿ ಸುಲಿಗೆ ಮಾಡಿದ್ದ ತಂಡವನ್ನು ಪೊಲೀಸರು ಬಂಧಿಸಿದ್ದಾರೆ. ಕಸ್ಟಮ್‌ ಮತ್ತು ಅಬಕಾರಿ ಸುದ್ದಿ ಎಂಬ ಪತ್ರಿಕೆಯ ಸಂಪಾದಕನೆಂದು ಹೇಳಿಕೊಳ್ಳಲುವ ಕಲೀಂ ಎಂಬಾತ ತನ್ನ ಇತರ ನಾಲ್ವರು ಸಹಚರರೊಂದಿಗೆ ರಾಮಮೂರ್ತಿ ನಗರದ ಸ್ಪಾ ಮೇಲೆ ದಾಳಿ ನಡೆಸಿ, ತಾವು ಪೊಲೀಸರು ಎಂದು ಬೆದರಿಸಿದ್ದ. ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದೀರೆಂದು ಹೇಳಿ, ಮಾಲೀಕನಿಂದ 1.4 ಲಕ್ಷ ರೂಪಾಯಿ ಕಿತ್ತು ಪರಾರಿಯಾಗಿದ್ದರು.

ಸದ್ಯ ಐವರನ್ನೂ ಪೊಲೀಸರು ಬಂಧಿಸಿದ್ದಾರೆ. ಆರ್ ಟಿ ನಗರದ ನಿವಾಸಿ ಸೈಯದ್ ಕಲೀಂ (28), ಸಂಪಂಗಿರಾಮ್ (31), ಆಸಿಫ್ ಬಾಬುಜಾನ್ (27), ಆನಂದ್ ರಾಜ್ (30) ಮತ್ತು ವಿನಾಯಕ (28) ಬಂಧಿತ ಆರೋಪಿಗಳು. ಕಲೀಂ ಬಿಟ್ಟು ಉಳಿದ ನಾಲ್ವರು ಹೋಮ್‌ ಗಾರ್ಡ್‌ಗಳಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಫೆಬ್ರವರಿ 26 ರಂದು ಸ್ಪಾ ಮೇಲೆ ದಾಳಿ ನಡೆಸಿದ ತಂಡ ತಾವು ಪೊಲೀಸರೆಂದು ಹೇಳಿತ್ತು. ವಿಚಾರಣೆ ವೇಳೆ ತನ್ನ ಸ್ನೇಹಿತರಾದ ಹೋಮ್ ಗಾರ್ಡ್ಸ್ ಗಳ ನೆರವಿನಿಂದ ದಾಳಿ ನಡೆಸಿರುವುದಾಗಿ ಪ್ರಮುಖ ಆರೋಪಿ ಕಲೀಂ ತಪ್ಪೊಪ್ಪಿಕೊಂಡಿದ್ದಾನೆ. ಸ್ಪಾ ಮಾಲೀಕರನ್ನು ಆನ್‌ಲೈನ್‌ನಲ್ಲಿ ಹಣ ವರ್ಗಾವಣೆ ಮಾಡುವಂತೆ ಕಲೀಂ ಒತ್ತಾಯಿಸಿದ್ದ. ಆತನಿಂದ 60,000 ರೂ ನಗದು ಮತ್ತು ಬ್ಯಾಂಕ್ ಖಾತೆಯಿಂದ 1 ಲಕ್ಷ ರೂ. ಹಣವನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.

Share Post