Bengaluru

ಮೃತ ನವೀನ್‌ ಕುಟುಂಬಸ್ಥರಿಗೆ HDK ಸಾಂತ್ವನ-ವಿದ್ಯಾರ್ಥಿಗಳ ರಕ್ಷಣೆ ತ್ವರಿತವಾಗಿ ಮಾಡಿ ಸರ್ಕಾರಕ್ಕೆ ಮನವಿ

ಬೆಂಗಳೂರು: ಉಕ್ರೇನ್‌ ಮೇಲೆ ರಷ್ಯಾ ನಡೆಸುತ್ತಿರುವ ದಾಳಿಯಲ್ಲಿ ಇಂದು ಹಾವೇರಿ ಜಿಲ್ಲೆ ಚಳಗೇರಿಯ ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ಬಲಿ ಆಗಿರುವುದು ನನಗೆ ತೀವ್ರ ಆಘಾತ ಉಂಟು ಮಾಡಿದೆ ಎಂದು ಮಾಜಿ ಸಿಎಂ ಹೆಚ್‌ಡಿಕೆ ತೀವ್ರ ಬೇಸರ ವ್ಯಕ್ತಪಡಿಸಿದ್ರು.  ಯುದ್ಧದಿಂದ ತತ್ತರಿಸಿರುವ ಖಾರ್ಕೀವ್ ನಗರದಲ್ಲಿದ್ದ ಆ ವಿದ್ಯಾರ್ಥಿ ಶೆಲ್ ದಾಳಿಯಲ್ಲಿ ಅಸುನೀಗಿದ್ದಾರೆಂಬ ಸುದ್ದಿ ಶಿವರಾತ್ರಿ ದಿನ ಬರಸಿಡಿಲಿನಂತೆ ಅಪ್ಪಳಿಸಿದೆ.  ವೈದ್ಯನಾಗಬೇಕು ಎಂಬ ಕನಸು ಹೊತ್ತು ನವೀನ್ ಅಲ್ಲಿಗೆ ಹೋಗಿದ್ದರು. ಭಾರತದಲ್ಲಿ, ದುಬಾರಿ ವೈದ್ಯ ಶಿಕ್ಷಣ ಕೈಗೆಟುಕದೇ ಅವರು ಉಕ್ರೇನ್ʼಗೆ ತೆರಳಿದ್ದರು. ಯುದ್ಧವು ಅವರ ಕನಸನ್ನು ನುಚ್ಚುನೂರು ಮಾಡಿದೆ. ಇಂಥ ಅನೇಕ ವಿದ್ಯಾರ್ಥಿಗಳು ಇನ್ನೂ ಖಾರ್ಕೀವ್ ನಗರದಲ್ಲೇ ಸಿಲುಕೊಂಡಿದ್ದಾರೆ.

ಶೆಲ್‌ ದಾಳಿಗೆ ತುತ್ತಾಗುವ ಮುನ್ನ 2 ಸಲ ತಮ್ಮ ಪೋಷಕರಿಗೆ ನವೀನ್‌ ಕರೆ ಮಾಡಿದ್ದರು, ಅದಾದ ಸ್ವಲ್ಪ ಹೊತ್ತಿನಲ್ಲೇ ಅಸುನೀಗಿದ್ದಾರೆ ಎಂಬುದನ್ನು ನೆನೆದರೆ ಬಹಳ ನೋವಾಗುತ್ತದೆ. ಬಾಂಬ್‌, ಕ್ಷಿಪಣಿ, ಶೆಲ್‌ ಸ್ಫೋಟಗಳಿಂದ ಅವರೆಲ್ಲರೂ ಖಾರ್ಕೀವ್‌ ನಗರದಲ್ಲಿ ತತ್ತರಿಸುತ್ತಿದ್ದಾರೆ. ಮೊದಲೇ ಇಲ್ಲಿ ಸಿಲುಕಿರುವವರನ್ನು ರಕ್ಷಿಸಬೇಕಿತ್ತು. ಆ ವಿದ್ಯಾರ್ಥಿಳೆಲ್ಲರೂ 6 ದಿನಗಳಿಂದ ಬಂಕರ್‌ʼನಲ್ಲೇ ಇದ್ದಾರೆ. ಅವರೀಗ ಕೇವಲ ಚಾಕೋಲೇಟ್‌, ಬಿಸ್ಕೆಟ್‌, ಸ್ನೀಕರ್‌ʼಗಳನ್ನು ತಿನ್ನುತ್ತಾ ಬದುಕುಳಿದಿದ್ದಾರೆ. ನೀರು-ಆಹಾರಕ್ಕೆ ತತ್ವಾರವಾಗಿದೆ ಎಂದು ಅಲ್ಲಿನ ಕನ್ನಡ ವಿದ್ಯಾರ್ಥಿಗಳು ಮಾಧ್ಯಮಗಳ ಮೂಲಕ ಅಳಲು ತೋಡಿಕೊಳ್ಳುತ್ತಿದ್ದಾರೆ.

ಕೇಂದ್ರ ಸರಕಾರ ಅಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ರಕ್ಷಿಸುವ ಕಾರ್ಯಾಚರಣೆಯನ್ನು ಇನ್ನಷ್ಟು ತೀವ್ರಗೊಳಿಸಬೇಕು. ಕನ್ನಡಿಗರ ರಕ್ಷಣೆಗೆ ರಾಜ್ಯ ಸರಕಾರವೂ ಮತ್ತಷ್ಟು ಕ್ಷಿಪ್ರವಾಗಿ ಕೆಲಸ ಮಾಡಬೇಕು. ಇನ್ನೊಂದು ಜೀವ ಹೋಗಲೂ ಬಿಡಬಾರದು. ಉಕ್ರೇನ್‌ ಭಾರತೀಯ ರಾಯಭಾರ ಕಚೇರಿ ಸೂಕ್ತವಾಗಿ ಸ್ಪಂದಿಸುತ್ತಿವಲ್ಲವೆಂಬ ಆರೋಪವೂ ಕೇಳಿಬರುತ್ತಿದೆ. ವಿದ್ಯಾರ್ಥಿ ನವೀನ್‌ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಮಗನನ್ನು ಕಳೆದುಕೊಂಡು ಅತೀವ ದುಃಖದಲ್ಲಿರುವ ಅವರ ಪೋಷಕರಿಗೆ ನನ್ನ ಪ್ರಗಾಢ ಸಂತಾಪಗಳು. ನವೀನ್‌ ಅವರ ಪಾರ್ಥೀವ ಶರೀರವನ್ನು ಆದಷ್ಟು ಬೇಗ ಅವರ ಕುಟುಂಬಕ್ಕೆ ತಲುಪಿಸುವ ಕೆಲಸ ಸರಕಾರದಿಂದ ಆಗಬೇಕು ಎಂದು ಟ್ವೀಟ್‌ ಮೂಲಕ ಮನವಿ ಮಾಡಿಕೊಂಡಿದ್ದಾರೆ.

Share Post