Districts

ಆಸ್ಪತ್ರೆಗೆ ತೆರಳುತ್ತಿದ್ದಾಗ ಬೈಕ್‌ ಅಡ್ಡ ಹಾಕಿದ ಪೊಲೀಸರು; ಮಾತಿನ ಚಕಮಕಿ

ಮಂಡ್ಯ: ಮಂಡ್ಯ ನಗರದ ಸಂಜೆ ವೃತ್ತದಲ್ಲಿ ಶ್ರೀರಂಗಪಟ್ಟಣದ ವಿನೋದ್ ಎಂಬ ಯುವಕನೊಬ್ಬ ಪೊಲೀಸರಿಗೆ ಅವ್ಯಾಚ ಶಬ್ದಗಳಿಂದ ನಿಂದಿಸಿದ ಘಟನೆ ನಡೆದಿದೆ. ಯುವಕ ತನ್ನ ತಾಯಿಗೆ ಅನಾರೋಗ್ಯದ ಕಾರಣ ಅವರನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಮಂಡ್ಯ ಜಿಲ್ಲಾಸ್ಪತ್ರೆಗೆ ತೆರಳುತ್ತಿದ್ದ. ಈ ವೇಳೆ ಬೈಕ್‌ ತಡೆದ ಟ್ರಾಫಿಕ್‌ ಪೊಲೀಸರು, ಹೆಲ್ಮೆಟ್‌ ಧರಿಸದಿದ್ದಕ್ಕೆ ಫೈನ್‌ ಹಾಕಿದ್ದಾರೆ. ಅಷ್ಟೇ ಅಲ್ಲದೇ, ಬೈಕ್‌ ಕೀ ಕಿತ್ತುಕೊಂಡಿದ್ದಾರೆ. ಇದ್ರಿಂದ ಯುವಕ ಆಕ್ರೋಶಗೊಂಡು ಪೊಲೀಸರ ವಿರುದ್ಧ ಕಿಡಿಕಾರಿದ್ದಾನೆ.

ಪೊಲೀಸರು ಹಾಗೂ ಯುವಕ ವಿನೋದ್‌ ನಡುವೆ ಮಾತಿನ ಚಕಮಕಿ ನಡೆದಿದ್ದು, ಇದೇ ವೇಳೆ ವಿನೋದ್‌ ತಾಯಿ ಸುಸ್ತಾಗಿ ಕುಸಿದುಬಿದ್ದಿದ್ದಾರೆ. ಇದ್ರಿಂದಾಗಿ ವಿನೋದ್‌ ಮತ್ತಷ್ಟು ಕೆರಳಿದ್ದಾನೆ. ಇದೇ ವೇಳೆ ಸ್ಥಳೀಯರು ಕೂಡಾ ವಿನೋದ್‌ ನೆರವಿಗೆ ಬಂದಿದ್ದಾರೆ. ನಂತರ ಆಟೋದಲ್ಲಿ ವಿನೋದ್‌ ತಾಯಿಯನ್ನು ಆಸ್ಪತ್ರೆಗೆ ಕಳುಹಿಸಲಾಯಿತು.

ಟ್ರಾಫಿಕ್‌ ರೂಲ್ಸ್‌ ನೆಪದಲ್ಲಿ ಪೊಲೀಸರು ಮಾನವೀಯತೆ ಮರೆಯುತ್ತಿದ್ದಾರೆ. ರೋಗಿಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಬಿಡದೇ ಸತಾಯಿಸಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share Post