BengaluruPolitics

Neera; ಮೇಲ್ಮನೆಯಲ್ಲಿ ನೀರಾ ಬಗ್ಗೆ ಮಾತು; ಡಿಸಿಎಂ ಡಿಕೆಶಿ ಪ್ರಸ್ತಾಪದಿಂದ ಸ್ವಾರಸ್ಯಕರ ಚರ್ಚೆ

ಬೆಂಗಳೂರು; 30-35 ವರ್ಷಗಳ ಹಿಂದೆ ನಾನು ನೀರಾ ಕುಡಿದಿದ್ದೆ. ಅದು ಜ್ಯೂಸ್ ನಂತಿತ್ತು. ನನಗೆ ಯಾವುದೇ ಮತ್ತು ಬರಲಿಲ್ಲ ಎಂಬ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮೆಲ್ಮನೆಯಲ್ಲಿ ಹೇಳಿದ್ದು ಸ್ವಾರಸ್ಯಕರ ಚರ್ಚೆಗೆ ಗ್ರಾಸವಾಯಿತು. ಪ್ರಶ್ನೋತ್ತರ ಕಲಾಪದ ವೇಳೆ ಬಿ.ಕೆ. ಹರಿಪ್ರಸಾದ್ ಅವರು, ರಾಜ್ಯದಲ್ಲಿ ಸಾರಾಯಿ ನಿಷೇಧದ ನಂತರ ಅನೇಕರು ಬೀದಿಗೆ ಬಂದಿದ್ದು, ಅಬಕಾರಿ ಇಲಾಖೆ ವತಿಯಿಂದ ಇವರಿಗಾಗಿ ಯಾವುದಾದರೂ ಕಾರ್ಯಕ್ರಮ ಹಮ್ಮಿಕೊಂಡಿದೆಯೇ ಎಂದು ಪ್ರಶ್ನೆ ಕೇಳಿದರು.

ಇದನ್ನೂ ಓದಿ; ಕಳ್ಳರ ಗ್ಯಾಂಗ್‌ಗೆ ಪೊಲೀಸಪ್ಪನೇ ಸೂತ್ರದಾರ; ಕಾನ್ಸ್‌ಟೇಬಲ್‌ ಹೇಳಿದಂತೆ ಕಳವಿಗೆ ಸ್ಕೆಚ್‌!

ನೀರಾಗೆ ಅವಕಾಶ ನೀಡುವ ಬಗ್ಗೆ ಚರ್ಚೆ;

ನೀರಾಗೆ ಅವಕಾಶ ನೀಡುವ ಬಗ್ಗೆ ಚರ್ಚೆ; ಈ ಸಂದರ್ಭದಲ್ಲಿ ಸೇಂದಿ, ಸಾರಾಯಿಯನ್ನು ಉಪಕಸುಬಾಗಿಸಿಕೊಂಡಿದ್ದ ಸಮುದಾಯಕ್ಕೆ ನೀರಾಕ್ಕೆ ಅನುಮತಿ ನೀಡುವ ಮೂಲಕ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂಬುದರ ಬಗ್ಗೆ ಚರ್ಚೆ ನಡೆಯಿತು. ಈ ಸಂದರ್ಭದಲ್ಲಿ ಪರಿಷತ್ ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ನೀರಾ ಸೇವನೆ ವಿಚಾರವಾಗಿ ಮಾಡಿಕೊಂಡ ಲಘು ಮಾತಿನ ವಿನಿಮಯ ಸದನವನ್ನು ನಗೆಗಡಲಲ್ಲಿ ತೇಲಿಸಿತು. ಕೋಟಾ ಶ್ರೀನಿವಾಸ ಪೂಜಾರಿ ಅವರು ಮಾತನಾಡಿ, “ಸಾರ್ವಜನಿಕ ಹಿಸಾಸಕ್ತಿಗಾಗಿ ಮಾಜಿ ಸಿಎಂಗಳಾದ ವಿರೇಂದ್ರ ಪಾಟೀಲ್ ಅವರ ಕಾಲದಲ್ಲಿ ಸೇಂದಿ ಹಾಗೂ ಯಡಿಯೂರಪ್ಪ ಅವರ ಕಾಲದಲ್ಲಿ ಸಾರಾಯಿ ನಿಷೇಧ ಮಾಡಲಾಯಿತು. ಸೇಂದಿ ಬದಲು ನೀರಾ ಬಂದಿದ್ದು, ನೀರಾ ಮಳಿಗೆಗಳ ಸ್ಥಾಪನೆಗೆ ಅನುಮತಿ ನೀಡಬೇಕು. ಈ ಸಮುದಾಯದವರಿಗೆ ನೀರಾ ಮಾರಲು ಎಂಎಸ್ಐಎಲ್ ನಲ್ಲಿ ಅವಕಾಶ ನೀಡಬೇಕು” ಎಂದು ಸರ್ಕಾರಕ್ಕೆ ಸಲಹೆ ಕೊಟ್ಟರು.

ಇದನ್ನೂ ಓದಿ; Loksabha; ಲೋಕಸಭಾ ಚುನಾವಣೆಯಲ್ಲಿ AI ಬಳಕೆ; ಸುಳ್ಳು ಸುದ್ದಿಗಳಿಗೆ ಬೀಳುತ್ತಾ ಬ್ರೇಕ್‌?

ಕೋಟಾ ಶ್ರೀನಿವಾಸ ಪೂಜಾರಿ ನೀರಾ ಕುಡಿದಿಲ್ಲವೇ..?;

ಕೋಟಾ ಶ್ರೀನಿವಾಸ ಪೂಜಾರಿ ನೀರಾ ಕುಡಿದಿಲ್ಲವೇ..?; ಈ ಸಂದರ್ಭದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ನೀವು ನೀರಾ ಕುಡಿಯುವ ಪ್ರಯತ್ನ ಮಾಡಿಲ್ಲವೇ ಎಂದು ಪೂಜಾರಿ ಅವರಿಗೆ ಕೇಳಿದರು. ಅದಕ್ಕೆ ಉತ್ತರಿಸಿದ ಪೂಜಾರಿ ಅವರು, “ನಾನು ನೀರಾ ಕುಡಿಯಬೇಕು ಎಂದು ಅಂದುಕೊಂಡೆ. ಆದರೆ, ಅದನ್ನು ಕುಡಿದ ಮೇಲೆ ನಿಂತುಕೊಳ್ಳುವ ಶಕ್ತಿ ನನ್ನಲ್ಲಿರುತ್ತದೆಯೇ ಎಂಬ ಅನುಮಾನ ಮೂಡಿತು. ನಾನು ಡಿ.ಕೆ. ಶಿವಕುಮಾರ್ ಅವರಂತೆ ದಪ್ಪಗಿದ್ದರೆ ಕುಡಿದ ನಂತರವೂ ನಿಲ್ಲುವ ಶಕ್ತಿ ಇರುತ್ತಿತ್ತು” ಎಂದು ಚಟಾಕಿ ಹಾರಿಸಿದಾಗ ಸದನದಲ್ಲಿ ನಗೆಬುಗ್ಗೆ. ಇದಕ್ಕೆ ಪ್ರತಿಕ್ರಿಯಿಸಿದ ಬಿ.ಕೆ ಹರಿಪ್ರಸಾದ್ ಅವರು, ಪೂಜಾರಿ ಅವರಿಗೆ ಕುಡಿಯುವ ಅಭ್ಯಾಸವಿಲ್ಲ. ಕುಡಿಸುವ ಅಭ್ಯಾಸವಿದೆ ಎಂದರು. ಆಗ ಡಿ.ಕೆ. ಶಿವಕುಮಾರ್ ಅವರು, “ಪ್ರಕೃತಿ ಮುಂದೆ ಯಾವುದೂ ಇಲ್ಲ. ಸುಮಾರು 30-35 ವರ್ಷಗಳ ಹಿಂದೆ ನಮ್ಮ ಪಕ್ಕದ ಊರಿನಲ್ಲಿ ನಾನು ನೀರಾ ಕುಡಿದಿದ್ದೆ. ಅದರಿಂದ ಮತ್ತು ಬರುವುದಿಲ್ಲ” ಎಂದು ನೀರಾ ಕುಡಿದ ತಮ್ಮ ಅನುಭವವನ್ನು ಮೆಲಕು ಹಾಕಿದರು.

ಇದನ್ನೂ ಓದಿ; Bommai; ಕಾಂಗ್ರೆಸ್‌ ಅವಧಿಯಲ್ಲೇ ರಾಜ್ಯಗಳಿಗೆ ಹೆಚ್ಚು ಅನ್ಯಾಯವಾಗಿದೆ; ಬಸವರಾಜ ಬೊಮ್ಮಾಯಿ‌

ನೀರಾ ಬಗ್ಗೆ ಪುಸ್ತಕ ಬರೆಯಬೇಕಂತೆ;

ನೀರಾ ಬಗ್ಗೆ ಪುಸ್ತಕ ಬರೆಯಬೇಕಂತೆ; ಆಗ ತೇಜಸ್ವಿನಿಗೌಡ ಅವರು, “ಶಿವಕುಮಾರ್ ಅವರು ನೀರಾ ನೆನಪು ಎಂಬ ಪುಸ್ತಕ ಬರೆಯಬಹುದು” ಎಂದು ಸಲಹೆ ಕೊಟ್ಟರು. ಮಾತು ಮುಂದುವರಿಸಿದ ಶಿವಕುಮಾರ್ ಅವರು, “ಪೂಜಾರಿ ಹಾಗೂ ರವಿ ಕುಮಾರ್ ಅವರು ಈ ಸಮುದಾಯದ ಜನರ ರಕ್ಷಣೆ ಬಗ್ಗೆ ಆಲೋಚಿಸುತ್ತಿದ್ದಾರೆ. ಈಗ ಬೀದಿ ಬದಿಯ ಎಳನೀರನ್ನು 20 ರೂಪಾಯಿಗೆ ಮಾರುತ್ತಾರೆ. ಆದರೆ ಅದನ್ನೇ ಪ್ಯಾಕೆಟ್ ಅಥವಾ ಬಾಟೆಲ್ ನಲ್ಲಿ ಹಾಕಿ ಮಾರಿದರೆ 100 ರೂ. ಕೊಟ್ಟು ಖರೀದಿ ಮಾಡುವ ಜನರೂ ಇದ್ದಾರೆ. ಅದೇ ರೀತಿ ಬಂಡವಾಳ ಹಾಕಿ ನೀರಾ ಉತ್ಪನ್ನವನ್ನು ಈ ವರ್ಗದ ಜನರಿಗೆ ಎಂಎಸ್ಐಎಲ್ ಮೂಲಕ ಮಾರಾಟಕ್ಕೆ ಅವಕಾಶ ಮಾಡಿಕೊಡಿ ಎಂದು ಕೇಳುತ್ತಿದ್ದಾರೆ. ಎಸ್.ಎಂ ಕೃಷ್ಣ ಅವರ ಕಾಲದಲ್ಲಿ ಇದೇ ಸದನದಲ್ಲಿ ಎಂ.ಸಿ ನಾಣಯ್ಯ ಅವರು ನೀರಾ ಕುರಿತು ಮಾಡಿದ ಭಾಷಣ ಇಡೀ ರಾಜ್ಯದ ಆರ್ಥಿಕ ವ್ಯವಸ್ಥೆಯನ್ನೇ ಬದಲಿಸಿತು. ಆಗ ಖೋಡೇ, ಮಲ್ಯ, ತಿಮ್ಮೇಗೌಡ, ನಾರಾಯಣಸ್ವಾಮಿ ಸೇರಿದಂತೆ ಅನೇಕರಿಗೆ ವ್ಯಾಪಾರದಲ್ಲಿ ನಷ್ಟ ಉಂಟಾಯಿತು. ಅದೇ ರೀತಿ ಇಂದು ನೀವು ಎತ್ತಿರುವ ವಿಚಾರ ಹಾಗೂ ಇದರಿಂದ ತೆಗೆದುಕೊಳ್ಳುವ ನಿರ್ಧಾರ ಮುಂದೆ ಬದಲಾವಣೆಗೆ ದಾರಿಯಾಗಬಹುದು. ಈ ಬಗ್ಗೆ ಸುದೀರ್ಘ ಚರ್ಚೆ ಆಗಬೇಕಿದೆ” ಎಂದರು.

ಇದನ್ನೂ ಓದಿ; Bommai; ಕಾಂಗ್ರೆಸ್‌ ಅವಧಿಯಲ್ಲೇ ರಾಜ್ಯಗಳಿಗೆ ಹೆಚ್ಚು ಅನ್ಯಾಯವಾಗಿದೆ; ಬಸವರಾಜ ಬೊಮ್ಮಾಯಿ‌

Share Post