CrimeNational

ಶ್ರೀನಗರದಲ್ಲಿ ಗುಂಡಿನ ದಾಳಿ; ಬ್ಯಾಂಕ್‌ ಮ್ಯಾನೇಜರ್‌ ಹತ್ಯೆ

ಶ್ರೀನಗರ; ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್‌ ಜಿಲ್ಲೆಯಲ್ಲಿ ಉಗ್ರರು ಬ್ಯಾಂಕ್‌ ಮ್ಯಾನೇಜರ್‌ ಒಬ್ಬರನ್ನು ಹತ್ಯೆ ಮಾಡಿದ್ದಾರೆ. ರಾಜಸ್ಥಾನದ ಹನುಮಾನ್‌ಗಡ ಮೂಲದ ಬ್ಯಾಂಕ್‌ ಮ್ಯಾನೇಜರ್‌ ವಿಜಯ್‌ ಕುಮಾರ್‌ ಹತ್ಯೆಯಾದವರು.

ಅರೇಹ್‌ ಮೋಹನ್‌ಪೊರಾದ ಇಲಾಖಿ ದೆಹಾತಿ ಬ್ಯಾಂಕ್‌ನ ವ್ಯವಸ್ಥಾಪಕ ವಿಜಯ್‌ ಕುಮಾರ್‌ ಅವರನ್ನು ಬ್ಯಾಂಕ್‌ ಆವರಣದೊಳಗೆ ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಸ್ಥಳವನ್ನು ಪೊಲೀಸರು ಸುತ್ತುವರಿದಿದ್ದು, ತನಿಖೆ ಕೈಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ತೀವ್ರವಾಗಿ ಗಾಯಗೊಂಡಿದ್ದ ಅವರು ಸಾವಿಗೀಡಾದರು. ಕಾಶ್ಮೀರದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿಂದೂ ಸಮುದಾಯದವರು ಮತ್ತು ಅವರ ಕುಟುಂಬದವರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಒತ್ತಾಯಿಸಿ ಜಮ್ಮುವಿನಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ.

ಸ್ಥಳೀಯೇತರರನ್ನು ಗುರಿಯಾಗಿಸಿಕೊಂಡು ಉಗ್ರರು ದಾಳಿ ಮುಂದುವರಿಸಿದ್ದು, ವಾರದ ಅಂತರದಲ್ಲಿ ನಾಗರಿಕರ ಮೇಲೆ ನಡೆದಿರುವ ಎರಡನೇ ದಾಳಿ ಇದಾಗಿದೆ. ಇತ್ತೀಚೆಗೆ ಶಾಲಾ ಶಿಕ್ಷಕಿಯೊಬ್ಬರ ಮೇಲೆ ಉಗ್ರರು ದಾಳಿ ನಡೆಸಿ ಹತ್ಯೆ ಮಾಡಿದ್ದರು. ‘ಉಗ್ರರು ಈಗ ಸಾರ್ವಜನಿಕ ಸೇವೆಯಲ್ಲಿರುವವರನ್ನೂ ಗುರಿಯಾಗಿಸಿಕೊಂಡಿದ್ದಾರೆ. ಇದು ತೀವ್ರ ಕಳವಳ ಸಂಗತಿಯಾಗಿದೆ. ಈ ಹಿಂಸಾಚಾರವನ್ನು ತಡೆಯುವ ನಿಟ್ಟಿನಲ್ಲಿ ಭದ್ರತಾ ಪಡೆಗಳು ಸೂಕ್ತ ಯೋಜನೆ ರೂಪಿಸಲು ಸಕಾಲವಾಗಿದೆ’ ಎಂದು ಜಮ್ಮು–ಕಾಶ್ಮೀರದ ಬಿಜೆಪಿ ವಕ್ತಾರ ಅಲ್ತಾಫ್‌ ಠಾಕೂರ್‌ ಪ್ರತಿಕ್ರಿಯಿಸಿದ್ದಾರೆ.

Share Post