DistrictsLifestyle

ಶಿವಮೊಗ್ಗದ ಈ ಊರಿನ ಜನರ ಆಡುಭಾಷೆ ಸಂಸ್ಕೃತ

ಶಿವಮೊಗ್ಗ;   ನೋಡೂ, ಈಗ ನನ್ನ ಬಾಯಲ್ಲಿ ಸಂಸ್ಕೃತ ಬರುತ್ತೆ.. ಜಗಳ ಆಡೋವಾಗ ಯಾರಾದರೂ ಹೀಗೆ ಹೇಳೋದನ್ನ ಕೇಳೇ ಇರ್ತೀವಿ… ನಾವೂ ಈ ಮಾತು ಆಡಿರಬಹುದು.. ಆದ್ರೆ, ನಾನು ಇಲ್ಲಿ ಹೇಳೋಕೆ ಹೊರಟಿರೋದು ಆ ಸಂಸ್ಕೃತದ ಬಗ್ಗೆ ಅಲ್ಲವೇ ಅಲ್ಲ… ಅಪ್ಪಟ ಭಾರತೀಯ ಸಂಸ್ಕೃತಿಯ ಸಂಸ್ಕೃತ ಭಾಷೆಯ ಬಗ್ಗೆ..

ಸಂಸ್ಕೃತ ದೇವರಾಡುವ ಭಾಷೆ ಅಂತಾರೆ.. ಆ ಭಾಷೆಯನ್ನು ನಾವು ಸಾಯಿಸೇ ಬಿಟ್ಟಿದ್ದೇವೆ… ಎಲ್ಲೋ ಲಕ್ಷಕ್ಕೊಬ್ಬರು ಸಂಸ್ಕೃತ ಮಾತನಾಡುತ್ತಾರೆ.. ಆದ್ರೆ ನಮ್ಮ ರಾಜ್ಯದಲ್ಲೇ ಒಂದು ಪುಟ್ಟ ಗ್ರಾಮ ಇದೆ.. ಆ ಗ್ರಾಮದಲ್ಲಿ ಎಲ್ಲರ ಆಡು ಭಾಷೆ ಈಗಲೂ ಸಂಸ್ಕೃತವೇ… ಇಲ್ಲಿನ ಜನ ನಿತ್ಯ ಸಂಭಾಷಣೆ ನಡೆಸೋದು ಇದೇ ಸಂಸ್ಕೃತದಲ್ಲಿ… ಇವರಿಗೆ ಇಲ್ಲಿ ಸಂಸ್ಕೃತ ಮಾತೃಭಾಷೆ.. ಅಚ್ಚರಿ ಎನಿಸಿದರೂ ಈ ದೃಶ್ಯ ನೋಡಿದ ಮೇಲೆ ಸತ್ಯ ಅನ್ನೋದು ನಿಮಗೆ ಅರ್ಥವಾಗಿರುತ್ತೆ…

ಈ ವಿಶೇಷವಾದ ಗ್ರಾಮದ ಹೆಸ್ರು ಮತ್ತೂರು.. ಶಿವಮೊಗ್ಗ ನಗರದಿಂದ ಕೇವಲ ನಾಲ್ಕು ಕಿಲೋ ಮೀಟರ್‌ ದೂರದಲ್ಲಿದೆ… ನಗರಕ್ಕೆ ಹತ್ತಿರವಿದ್ದರೂ, ಈ ಗ್ರಾಮದಲ್ಲಿ ನಗರದ ಲಕ್ಷಣಗಳೇನೂ ಕಂಡಬರುವುದಿಲ್ಲ.. ಅಪ್ಪಟ ಭಾರತೀಯ ಗ್ರಾಮವಿದು.. ಸಂಪ್ರದಾಯಸ್ಥ ಸಂಸ್ಕೃತವನ್ನಷ್ಟೇ ಉಸಿರಾಡುವ ಹಳ್ಳಿ ಇದು… ಹೀಗಾಗಿಯೇ ಮತ್ತೂರನ್ನ ಸಂಸ್ಕೃತ ಗ್ರಾಮ ಅಂತಾನೇ ಕರೀತಾರೆ..

ಇದನ್ನು ಮಥೂರು ಅಂತಾನೂ ಕರೀತಾರೆ… ಇಲ್ಲಿ ಕಾಲಿಟ್ಟರೆ ಬರೀ ಸಂಸ್ಕೃತದ ಶಬ್ದಗಳೇ ಕೇಳಿಸೋದು… ತುಂಗಾ ನದಿಯ ದಡದಲ್ಲಿರುವ ಈ ಪ್ರಶಾಂತವಾದ ಗ್ರಾಮದ ಜನರು ದೇವ ಭಾಷೆಯನ್ನೇ ಉಸಿರಾಗಿಸಿಕೊಂಡಿದ್ದಾರೆ.. ಇಲ್ಲಿ ಸಂಸ್ಕೃತ ಬೋಧನೆಗಳನ್ನು ಹೇಳಿಕೊಡಲಾಗತ್ತೆ.. ವಿಶೇಷ ಅಂದ್ರೆ, ಈ ಗ್ರಾಮದ ಜನರು ತಮ್ಮ ದೈನಂದಿನ ಭಾಷೆಯನ್ನು ಸಂಸ್ಕೃತದಲ್ಲಿಯೇ ಮಾತನಾಡುತ್ತಾರೆ.. ಯಾರಾದರೂ ಹೊರಗಡೆಯಿಂದ ಹೋದರೆ ಮಾತ್ರ ಅವರೊಂದಿಗೆ ಕನ್ನಡ ಮಾತನಾಡುತ್ತಾರೆ ಅಷ್ಟೇ.. ಉಳಿದೆಲ್ಲಾ ಸಮಯದಲ್ಲೂ ಅವ್ರು ಸಂಸ್ಕೃತದಲ್ಲೇ ವ್ಯವಹರಿಸೋದು..

ಇಲ್ಲಿನ ವೇದಾಂತ ಶಾಲೆಯನ್ನು ಹೊಳೆನರಸಿಪುರ ದತ್ತಿಯ ಸಹಯೋಗದೊಂದಿಗೆ ನಡೆಸಲಾಗುತ್ತಿದೆ. ಮುಖ್ಯವಾಗಿ ಶಂಕರ ವೇದಾಂತವನ್ನು ಬೋಧಿಸುವ ಬೆರಳಣಿಕೆಯ ಶಾಲೆಗಳಲ್ಲಿ ಇದು ಕೂಡ ಒಂದಾಗಿದೆ. ರಾಜ್ಯದ ಭಾಷೆ ಕನ್ನಡವಾಗಿದ್ದರೂ ಕೂಡ ಇಲ್ಲಿನ ಜನರು ಸಂಸ್ಕೃತವನ್ನು ತಮ್ಮ ದಿನನಿತ್ಯದ ಸಂವನಕ್ಕಾಗಿ ಬಳಸುತ್ತಾರೆ. 5000 ಕ್ಕಿಂತ ಹೆಚ್ಚಿನ ಜನರನ್ನು ಹೊಂದಿರುವ ಈ ಗ್ರಾಮವು ಅರ್ಧಕ್ಕಿಂತ ಹೆಚ್ಚಿನ ಜನರು ಸಂಸ್ಕೃತವನ್ನು ತಮ್ಮ ದಿನನಿತ್ಯದ ಭಾಷೆಯಾಗಿಸಿಕೊಂಡಿದ್ದಾರೆ.

 

Share Post