Districts

ಹುಬ್ಬಳ್ಳಿಯಲ್ಲಿ ಮತ್ತೊಂದು ಭೀಕರ ಅಪಘಾತ; ಎಂಟು ಮಂದಿ ದುರ್ಮರಣ

ಹುಬ್ಬಳ್ಳಿ; ಹುಬ್ಬಳ್ಳಿ-ಧಾರವಾಡದಲ್ಲಿ ಕೆಲ ದಿನಗಳಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಕಳೆದ ರಾತ್ರಿ ಕೂಡಾ ಭಿಕರ ಅಪಘಾತ ನಡೆದಿದ್ದು, ಎಂಟು ಮಂದಿ ಸಾವನ್ನಪ್ಪಿದ್ದಾರೆ. ತಾರಿಹಾಳ ಬೈಪಾಸ್‌ನ ಧಾರಾವತಿ ದೇವಸ್ಥಾನದ ಬಳಿ ರಾತ್ರಿ 1.30ರಲ್ಲಿ ಸರಣಿ ಅಪಘಾತ ನಡೆದಿದ್ದು, 8 ಮಂದಿ ಸಾವಿಗೀಡಾಗಿದ್ದಾರೆ. ಹಲವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ಚಲಿಸುತ್ತಿದ್ದ ಟ್ರ್ಯಾಕ್ಟರ್‌ಗೆ ಹಿಂಬದಿಯಿಂದ ಟೂರಿಸ್ಟ್ ಬಸ್ ಡಿಕ್ಕಿ ಹೊಡೆದಿದ್ದು, ಅದರ ಹಿಂದೆ ಬಂದ ಲಾರಿ ಬಸ್‌ಗೆ ಡಿಕ್ಕಿ ಹೊಡೆದಿದೆ. ಈ ಸರಣಿ ಅಪಘಾತದಲ್ಲಿ ನ್ಯಾಷನಲ್ ಟ್ರಾವೆಲ್ಸ್ ಟೂರಿಸ್ಟ್ ಬಸ್‌ನಲ್ಲಿದ್ದ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಉಳಿದ ಐದು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಗಾಯಗೊಂಡವರನ್ನು ಕಿಮ್ಸ್‌ಗೆ ದಾಖಲಿಸಲಾಗಿದೆ.

ಬಸ್ ಕೊಲ್ಹಾಪುರದಿಂದ ಬೆಂಗಳೂರಿಗೆ ಬರುತ್ತಿತ್ತೆಂದು ತಿಳಿದುಬಂದಿದೆ. ಮೃತರ ಪೈಕಿ ನಾಲ್ವರನ್ನು ಗುರುತಿಸಲಾಗಿದೆ. ಬಸ್ ಚಾಲಕರಾದ ಅತಾವುಲ್ಲಾ ಹಾಗೂ ನಾಗರಾಜ, ಚಿಕ್ಕೋಡಿಯ ಬಾಬುಸಾಹೇಬ್ (55), ಮೈಸೂರು ಮೂಲದ ಮಹ್ಮದ್ ದಯ್ಯಾನ್ (17) ಮೃತಪಟ್ಟ ದುರ್ದೈವಿಗಳು. ಇನ್ನುಳಿದವರ ಹೆಸರು ಗೊತ್ತಾಗಬೇಕಿದೆ.

 

Share Post