CrimeDistricts

ರಾತ್ರಿ ಪತ್ನಿಗೆ ಹೊಡೆದು ಹೊರಕಳುಹಿಸಿದ; ಬೆಳಗ್ಗೆ ಆಕೆ ಶವವಾಗಿದ್ದಳು..!

ಚಿಕ್ಕಮಗಳೂರು; ಪತ್ನಿಯ ಶೀಲ ಶಂಕಿಸಿ ದಿನವೂ ರಾತ್ರಿ ಕುಡಿದುಬಂದು ಹೊಡೆಯುತ್ತಿದ್ದ. ಕಳೆದ ರಾತ್ರಿಯೂ ಜಗಳ ತಾರಕಕ್ಕೇರಿ ಪತ್ನಿಗೆ ಕೊಡಲಿಯಿಂದ ಹಲ್ಲೆ ಮಾಡಿದ್ದಾನೆ. ನಂತರ ಆಕೆಯನ್ನು ಮನೆಯಿಂದ ಹೊರದೂಡಿ ಮನೆಯಲ್ಲಿ ಮಲಗಿಬಿಟ್ಟಿದ್ದಾನೆ. ಬೆಳಗ್ಗೆ ಎದ್ದು ನೋಡಿದಾಗ ಆಕೆಯ ಪ್ರಾಣಪಕ್ಷಿಯೇ ಹಾರಿಹೋಗಿದೆ. ಈ ಘಟನೆ ನಡೆದಿರೋದು ಮೂಡಿಗೆರೆ ತಾಲ್ಲೂಕಿನ ಕಿರಗುಂದ ಗ್ರಾಮದಲ್ಲಿ..

ನಲವತ್ತು ವರ್ಷದ ಪದ್ಮಾಕ್ಷಿ ಎಂಬಾಕೆಯೇ ಸಾವನ್ನಪ್ಪಿದ ದುರ್ದೈವಿ. ಕಿರಗುಂದ ಗ್ರಾಮದ ಕಾಫಿತೋಟದಲ್ಲಿ ಚಂದ್ರ ಹಾಗೂ ಪದ್ಮಾಕ್ಷಿ ದಂಪತಿ ಕೆಲಸ ಮಾಡುತ್ತಿದ್ದರು. ಚಂದ್ರನಿಗೆ ತನ್ನ ಪತ್ನಿ ಪದ್ಮಾಕ್ಷಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನ. ಈ ಕಾರಣಕ್ಕಾಗಿ ದಿನವೂ ಜಗಳ ಮಾಡುತ್ತಿದ್ದ.

ಕಳೆದ ರಾತ್ರಿ ಕೂಡಾ ಆತ ಕಂಠಪೂರ್ತಿ ಕುಡಿದು ಬಂದು ಪತ್ನಿ ಜೊತೆ ಜಗಳ ಮಾಡಿದ್ದಾನೆ. ಇದೇ ವೇಳೆ ಆಕೆ ಮೇಲೆ ಹಲ್ಲೆ ಮಾಡಿದ್ದಾನೆ. ಸಾಲದೆಂಬಂತೆ ಕೊಡಲಿಯಿಂದ ದಾಳಿಯೂ ಮಾಡಿದ್ದಾನೆ. ನಂತರ ಮನೆಯೊಂದ ಹೊರದೂಡಿ ಮಲಗಿಬಿಟ್ಟಿದ್ದಾನೆ. ಪದ್ಮಾಕ್ಷಿ ರಾತ್ರಿಯಿಡೀ ಮನೆ ಹೊರಗೇ ಇದ್ದಳು. ಈ ವೇಳೆ ವಿಪರೀತ ಚಳಿ ಹಾಗೂ ರಕ್ತಸ್ರಾವದಿಂದಾಗಿ ಆಕೆ ಮೃತಪಟ್ಟಿದ್ದಾಳೆ. ಗಂಡ ಚಂದ್ರ ಬೆಳಗ್ಗೆ ಎದ್ದು ನೋಡಿದಾಗ ಪದ್ಮಾಕ್ಷಿ ಮೃತಪಟ್ಟಿರುವುದನ್ನು ನೋಡಿ ಕಣ್ಣೀರಿಟ್ಟಿದ್ದಾನೆ.

ಸ್ಥಳೀಯರ ಮಾಹಿತಿಯನ್ನಾಧರಿಸಿ ಪೊಲೀಸರು ಚಂದ್ರನನ್ನು ಬಂಧಿಸಿದ್ದಾರೆ. ಇನ್ನು ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ನಿನ್ನೆ ಅವರು ಮನೆಯಲ್ಲಿರಲಿಲ್ಲ. ಘಟನೆ ತಿಳಿದ ಮೇಲೆ ಸ್ಥಳಕ್ಕಾಗಮಿಸಿದ್ದಾರೆ.

 

Share Post