Bengaluru

ಕಲಾಪದಲ್ಲಿ ಚರ್ಚೆಗೆ ಸಿಗದ ಅವಕಾಶ; ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಜೆಡಿಎಸ್ ಶಾಸಕರ ಧರಣಿ

ಬೆಂಗಳೂರು: ಆಡಳಿತ ಪಕ್ಷದ ಅಸಮರ್ಥತೆ ಹಾಗೂ ಪ್ರತಿಪಕ್ಷದ ಪ್ರತಿಷ್ಠೆಯಿಂದ ವಿಧಾನಮಂಡಲ ಕಲಾಪ ಸಂಪೂರ್ಣವಾಗಿ ಹಾಳಾಗಿದ್ದು, ಇದರ ವಿರುದ್ಧ ಜೆಡಿಎಸ್ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ವಿಧಾನಸೌಧ ಬಳಿಯ ಗಾಂಧಿ ಪ್ರತಿಮೆ ಎದುರು ಪ್ರತಿಭಟನಾ ಧರಣಿ ನಡೆಸಿದರು.

ಪಕ್ಷದ ಎಲ್ಲ ಶಾಸಕರು, ಸುಗಮ ಕಲಾಪಕ್ಕೆ ಅವಕಾಶ ಮಾಡಿಕೊಡದ ಎರಡೂ ರಾಷ್ಟ್ರೀಯ ಪಕ್ಷಗಳ ವಿರುದ್ಧ ಘೋಷಣೆಗಳನ್ನು ಕೂಗಿ, ಭಿತ್ತಿ ಪತ್ರಗಳನ್ನು ಹಿಡಿದು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ಕಲಾಪವನ್ನು ವ್ಯವಸ್ಥಿತ ರೀತಿಯಲ್ಲಿ ನಡೆಸುತ್ತಿಲ್ಲ. ಕಾಂಗ್ರೆಸ್ ಪಕ್ಷವು ಕಲಾಪವನ್ನು ನುಂಗಿ ಹಾಕಿದೆ ಎಂದು ಜೆಡಿಎಸ್ ಶಾಸಕರು ಕಾಂಗ್ರೆಸ್ ವಿರುದ್ಧ ಧಿಕ್ಕಾರ ಕೂಗಿದರು.

“ಕರ್ನಾಟಕವನ್ನು ಅಭಿವೃದ್ಧಿ ಮುಕ್ತ ರಾಜ್ಯವನ್ನಾಗಿ ಮಾಡುತ್ತಿರುವ ರಾಷ್ಟ್ರೀಯ ಪಕ್ಷಗಳು ಸದನದ ಕಲಾಪವನ್ನು ರಾಜಕೀಯ ಗುರಿ ಸಾಧನೆಗೆ ಗುರಣಿಯನ್ನಾಗಿ ಮಾಡಿಕೊಂಡಿವೆ. ಜನರ ನಿರೀಕ್ಷೆಗಳನ್ನು ಎರಡೂ ಪಕ್ಷಗಳು ಹೊಸಕಿ ಹಾಕುತ್ತಿವೆ” ಎಂದು ಪ್ರತಿಭಟನೆ ನಂತರ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.

ರಾಜ್ಯದ ಸಮಸ್ಯೆಗಳು ಹಾಗೂ ಜನರ ಕಷ್ಟಗಳ ಬಗ್ಗೆ ಅಧಿವೇಶನದಲ್ಲಿ ನಾವು ಚರ್ಚೆ ಮಾಡಬೇಕಿತ್ತು. ಆದರೆ ಅದಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಅವಕಾಶ ನೀಡುತ್ತಿಲ್ಲ. ರಾಜ್ಯದಲ್ಲಿ ಕೋವಿಡ್ ಕಾರಣದಿಂದ ಹದಗೆಟ್ಟ ಜನಜೀವನ ಇನ್ನೂ ಸುಧಾರಿಸಿಲ್ಲ. ಹಿಜಾಬ್ ಮತ್ತು ಕೇಸರಿ ಶಾಲು ವಿವಾದಗಳಿಂದ ಎರಡು ಧರ್ಮಗಳ ನಡುವೆ ಸಂಘರ್ಷ ಏರ್ಪಟ್ಟಿದೆ. ಶಾಲೆ ಕಾಲೇಜುಗಳಲ್ಲಿ ಸಂಘರ್ಷದ ವಾತಾವರಣ ಉಂಟಾಗಿದೆ. ಕೋವಿಡ್ ಮತ್ತು ಹಿಜಾಬ್ ಗಲಾಟೆಯಿಂದ ಶಿಕ್ಷಣ ಕ್ಷೇತ್ರ ಹಾಳಾಗಿದೆ. ಈ ಎಲ್ಲ ವಿಷಯಗಳನ್ನೂ ಸದನದಲ್ಲಿ ಚರ್ಚೆ ನಡೆಸಬೇಕಿತ್ತು ಎಂದು ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಸರ್ಕಾರಕ್ಕೆ ಸದನ ನಡೆಸುವ ಬದ್ಧತೆ ಇದ್ದರೆ ಗಲಾಟೆ ಮಾಡಿ ಕಲಾಪ ಹಾಳು ಮಾಡುತ್ತಿದ್ದವರನ್ನು ಹೊರಗೆ ಹಾಕಬೇಕಿತ್ತು. ಇಲ್ಲವೇ, ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಬೇಕಿತ್ತು ಎಂದು ಮಾಜಿ ಮುಖ್ಯಮಂತ್ರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ರು.

ಎರಡೂ ಸದನಗಳು ಪ್ರಾರಂಭವಾಗಿ ಒಂದು ವಾರ ಆಗಿದೆ. ಜನರ ಸಮಸ್ಯೆಗಳನ್ನು ಚರ್ಚೆ ಮಾಡುವುದು ಸದನ ಕರೆಯುವ ಉದ್ದೇಶ. ಸದನದಲ್ಲಿ ಭಾಗವಹಿಸುವುದು ಎಲ್ಲಾ ಸದಸ್ಯರ ಹಕ್ಕು. ತಮ್ಮ ಕ್ಷೇತ್ರದ ಸಮಸ್ಯೆ ಗಳನ್ನು ಚರ್ಚೆ ಮಾಡುವುದು ಸದಸ್ಯರ ಹಕ್ಕು. ಧರಣಿ ಮಾಡುವುದು ಎಲ್ಲರ ಹಕ್ಕು. ಆದರೆ ಈ ರೀತಿ ಅಹೋರಾತ್ರಿ ಧರಣಿ ಮಾಡುತ್ತಾ ಜನರ ಹಣ ಪೋಲು ಮಾಡುತ್ತಿರುವುದು ಸರಿಯಲ್ಲ ಎಂದು ಪಕ್ಷದ ರಾಜ್ಯ ಅಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ  ಹೇಳಿದರು.

ಸರಕಾರಕ್ಕೆ ನಾವು ಒತ್ತಾಯ ಮಾಡುವುದು ಇಷ್ಟೇ. ಸದನ ಸರಿಯಾಗಿ ನಡೆಸಿ. ಇಲ್ಲವೇ ಕಲಾಪಕ್ಕೆ ಅಡ್ಡಿ ಮಾಡುವವರನ್ನು ಸಸ್ಪೆಂಡ್ ಮಾಡಿ ಅಥವಾ ಹೊರಗೆ ಹಾಕಲು ಅವಕಾಶ ಇದೆ. ಆ ರೀತಿ ತೀರ್ಮಾನ ತೆಗೆದುಕೊಂಡು ಸದನ ನಡೆಸಿ. ವಿರೋಧ ಪಕ್ಷದವರಿಗೆ ಈಶ್ವರಪ್ಪ ಅವರದ್ದು ಒಂದೇ ವಿಷಯವಾಗಿದೆ ಎಂದು ಕಿಡಿ ಕಾರಿದ್ದಾರೆ.

 

Share Post