BengaluruPolitics

ಎರಡನೇ ಬೊಮ್ಮಾಯಿ ಆದರಾ ಸಿದ್ದರಾಮಯ್ಯ..?; ಹಾರ ಬೇಡವಂತೆ, ಪುಸ್ತಕ ಬೇಕಂತೆ..!

ಬೆಂಗಳೂರು; ನಾಳೆಯಿಂದ ಹಾರ-ತುರಾಯಿ ಸ್ವೀಕರಿಸಲ್ಲ, ಕೊಡೋದಿದ್ದರೆ ಪುಸ್ತಕ ಕೊಡಿ… ಹೀಗಂತ ನೂತನ ಸಿಎಂ ಸಿದ್ದರಾಮಯ್ಯ ಆರ್ಡರ್‌ ಮಾಡಿದ್ದಾರೆ.. ಈ ಮಾತನ್ನ ಕೇಳೋದಕ್ಕೆ ಚೆನ್ನಾಗಿಯೇ ಅನಿಸುತ್ತೆ… ಆದ್ರೆ ಈ ಮಾತು ಕೇಳಿದಾಕ್ಷಣ ನೆನಪಿಗೆ ಬರೋದು 2021ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. ಅಂದು ಸಿಎಂ ಆದ ಹೊಸದರಲ್ಲಿ ಬವಸರಾಜ ಬೊಮ್ಮಾಯಿಯವರು ಸರ್ಕಾರಿ ಆದೇಶವನ್ನೇ ಹೊರಡಿಸಿಬಿಟ್ಟಿದ್ದರು. ಸರ್ಕಾರಿ ಕಾರ್ಯಕ್ರಮದಲ್ಲಿ ಹಾರ, ತುರಾಯಿಗಳ ಬದಲಾಗಿ ಪುಸ್ತಕಗಳನ್ನು ನೀಡಿ ಎಂದು ಆದೇಶ ಹೊರಡಿಸಲಾಗಿತ್ತು.. ಆದ್ರೆ ಈ ಆದೇಶ ಪಾಲನೆಯಾಗಿದ್ದು ಕಾಣಲೇ ಇಲ್ಲ…

ನಿಮ್ಮ ಅವಗಹಣೆಗೆ ಆದೇಶದ ಪ್ರತಿಯನ್ನು ಇಲ್ಲಿ ಲಗತ್ತಿಸಿದ್ದೇವೆ.

  ಅಂದು ಸಿಎಂ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಬೊಮ್ಮಾಯಿಯವರು ಈ ರೀತಿಯಾಗಿ ಬರೆದುಕೊಂಡಿದ್ದರು.

ʻಮುಖ್ಯಮಂತ್ರಿ @BSBommai ರವರ ನಿರ್ದೇಶನದಂತೆ, ಇನ್ನು ಮುಂದೆ ರಾಜ್ಯ ಸರ್ಕಾರ ಮತ್ತು ಸರ್ಕಾರದ ಸ್ವಾಮ್ಯಕ್ಕೊಳಪಡುವ ಸಂಸ್ಥೆಗಳು ನಡೆಸುವ ಸಭೆ-ಸಮಾರಂಭಗಳಲ್ಲಿ ಹೂಗುಚ್ಛ, ಹಾರ, ತುರಾಯಿ, ಹಣ್ಣಿನ ಬುಟ್ಟಿ, ಶಾಲು, ನೆನಪಿನ ಕಾಣಿಕೆ ಇತ್ಯಾದಿ ಯಾವುದೇ ರೀತಿಯ ಕಾಣಿಕೆ ನೀಡಬಾರದು ಎಂದು ಸರ್ಕಾರದ ಮುಖ್ಯಕಾರ್ಯದರ್ಶಿಗಳು ಸುತ್ತೋಲೆ ಹೊರಡಿಸಿದ್ದಾರೆ.ʼ

ಇದು ಬೊಮ್ಮಾಯಿ ಸರ್ಕಾರದ ಆದೇಶವಾಗಿತ್ತು. ಇದನ್ನು ನೋಡಿ ಪುಸ್ತಕ ಪ್ರಕಾಶಕರು ಒಂದಿಷ್ಟು ಪುಸ್ತಕಗಳು ಸೇಲಾಗಬಹುದು ಎಂದು ಖುಷಿಪಟ್ಟಿದ್ದರು. ಬೊಮ್ಮಾಯಿಯವರು ಒಳ್ಳೆ ಆದೇಶ ಮಾಡಿದ್ದಾರೆ. ಇದು ಒಳ್ಳೆ ಬೆಳವಣಿಗೆ ಎಂದು ಹೇಳಿಕೊಂಡಿದ್ದರು. ಆದ್ರೆ ಕೆಲವೇ ದಿನಗಳಲ್ಲಿ ಅವರಿಗೆ ಭ್ರಮನಿರಸನವಾಗಿತ್ತು.

ಇನ್ನು ಈಗ ಸಿಎಂ ಆಗಿರುವ ಸಿದ್ದರಾಮಯ್ಯ ಅವರು ಕೂಡಾ ಇದೇ ರೀತಿಯ ಟ್ವೀಟ್‌ ಮಾಡಿದ್ದಾರೆ.

ಸಿದ್ದರಾಮಯ್ಯ ಟ್ವೀಟ್‌ನಲ್ಲೇನಿದೆ..?

ʻನಾಳೆಯಿಂದ ಸಾರ್ವಜನಿಕರಿಂದ ಗೌರವ-ಸನ್ಮಾನದ ರೂಪದಲ್ಲಿ ಹಾರ-ತುರಾಯಿ, ಶಾಲು-ಶಲ್ಯಗಳನ್ನು ಸ್ವೀಕರಿಸದೆ ಇರಲು ನಿರ್ಧರಿಸಿದ್ದೇನೆ. ಇದು ನನ್ನ ಮನೆ-ಕಚೇರಿ ಮತ್ತು ಸಾರ್ವಜನಿಕ ಸಮಾರಂಭಗಳಿಗೂ ಅನ್ವಯ. ಪ್ರೀತಿ-ಗೌರವವನ್ನು ಕಾಣಿಕೆಗಳ ಮೂಲಕವೇ ಸಲ್ಲಿಸಬೇಕೆನ್ನುವವರು ಪುಸ್ತಕಗಳನ್ನು ನೀಡಬಹುದು. ನಿಮ್ಮೆಲ್ಲರ ಪ್ರೀತಿ-ಅಭಿಮಾನ ಸದಾ ನನ್ನ ಮೇಲಿರಲಿ.ʼ
  ಅಧಿಕಾರ ಸಿಕ್ಕ ಹೊಸದರಲ್ಲಿ ಇಂತಹ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಾರೆ.. ಆದ್ರೆ ಇದನ್ನು ಪಾಲಿಸುತ್ತಾರಾ ಅನ್ನೋದೇ ಪ್ರಶ್ನೆ. ಅಷ್ಟಕ್ಕೂ ಹೂವು, ಹಾರ ಯಾಕೆ ಬೇಡ ಅನ್ನೋ ಪ್ರಶ್ನೆ ಮೂಡುತ್ತದೆ.  ಹೂವು ಇರೋದೇ ಇದಕ್ಕಾಗಿ. ಅದೊಂದು ಮೊದಲಿನಿಂದಲೂ ಬಂದ ಸಂಪ್ರದಾಯ. ಅಷ್ಟೇ ಏಕೆ, ಹೂವು ಬೆಳೆದು ಜೀವನ ಕಟ್ಟಿಕೊಂಡ ಸಾವಿರಾರು ರೈತರು ಕರ್ನಾಟಕದಲ್ಲಿದ್ದಾರೆ.. ಜನಪ್ರತಿನಿಧಿಗಳೆನಿಸಿಕೊಂಡವರು ಇಂತಹ ನಿರ್ಧಾರಗಳನ್ನು ತೆಗೆದುಕೊಂಡರೆ ಹೂವು ಬೆಳೆಗಾರರಿಗೆ ನಷ್ಟ ಆಗೋದಿಲ್ಲವೇ..?. ಹೂವು ಗಿಡದಲ್ಲಿದ್ದರೂ, ಅದನ್ನು ಕಿತ್ತು ಹಾರ ಮಾಡಿದರೂ ಅದು ಇರೋದು ಒಂದೆರಡು ದಿನವೇ.. ಹೀಗಾಗಿ ಅವರನ್ನು ಹಾರ ತುರಾಯಿಯ ರೂಪದಲ್ಲಿ ಬಳಸೋದ್ರಿಂದ ಯಾವ ತೊಂದರೆಯೂ ಆಗಲಾರದು. ಹಾರು ತುರಾಯಿಗಳು ಒಣಗಿದ ನಂತರ ಗೊಬ್ಬರವಾಗುತ್ತವೆ. ಹೀಗಾಗಿ, ಅದರಿಂದ ಪರಿಸರಕ್ಕೂ ಹಾನಿಯಾಗುವುದಿಲ್ಲ. ಆದರೂ ಯಾಕೆ ನಿರ್ಧಾರ ಗೊತ್ತಾಗುತ್ತಿಲ್ಲ.
   ಇನ್ನು ಪುಸ್ತಕಗಳನ್ನು ನೀಡಿ ಎನ್ನುವ ಸಿಎಂ ಅದನ್ನು ಓದುತ್ತಾರೆಯೇ..? ಬರುವ ಸಾವಿರಾರು ಪುಸ್ತಕಗಳನ್ನು ಎಲ್ಲಿಡುತ್ತಾರೆ..? ಲೈಬ್ರರಿಗೆ ಕೊಡಬಹುದು. ಆದ್ರೆ ಲೈಬ್ರರಿಗಳಲ್ಲಿ ಇರೋ ಪುಸ್ತಕಗಳನ್ನೇ ಯಾರೂ ಓದುತ್ತಿಲ್ಲ. ಜೊತೆಗೆ ಪ್ರಕಾಶಕರು ಪ್ರಕಟಿಸಿದ ಪುಸ್ತಕಗಳನ್ನೂ ಸರ್ಕಾರಿ ಸರಿಯಾಗಿ ಖರೀದಿ ಮಾಡುತ್ತಿಲ್ಲ. ಇಂತಹ ಪರಿಸ್ಥಿತಿ ಇಂತಹದ್ದೊಂದು ನಿರ್ಧಾರದಿಂದ ಯಾರಿಗೆ ಏನು ಲಾಭ ಅನ್ನೋ ಪ್ರಶ್ನೆ ಮೂಡೋದು ಸಹಜ.
   ಆದರೂ ಸಿದ್ದರಾಮಯ್ಯ ಹಾರತುರಾಯಿ ಬೇಡ ಅಂದಿದ್ದಾರೆ. ಪುಸ್ತಕ ಕೊಡಿ ಅಂದಿದ್ದಾರೆ. ಅದು ಎಷ್ಟು ದಿನ ನಡೆಯುತ್ತೋ ಯಾರಿಗೂ ಗೊತ್ತಿಲ್ಲ. ಆದ್ರೆ, ಸಮಾರಂಭ ಅಂದ ಮೇಲೆ ಹೂರ ತುರಾಯಿ ಇಲ್ಲ ಅಂದ್ರೆ ಅದಕ್ಕೆ ಕಳೆಯೇ ಇರೋದಿಲ್ಲ. ಪುಸ್ತಕ ಎಂದಿಗೂ ಹೂವಿಗೆ ಪರ್ಯಾಯವಾಗಲಾರದು ಅಲ್ಲವೇ..?
Share Post