BengaluruCrime

12 ಗಂಟೆಯಲ್ಲೇ ಸಿಕ್ಕಿಬಿದ್ದರು ಅಪಹರಣಕಾರರು; ವಿಕಾಸ್‌ ಬೋರಾ ಕಿಡ್ನ್ಯಾಪ್‌ಗೆ ಕಾರಣ ಏನು..?

ಬೆಂಗಳೂರು; ಪೀಠೋಪಕರಣಗಳ ಅಂಗಡಿ ಮಾಲೀಕನ ಅಪಹರಣ ಪ್ರಕರಣವನ್ನು ಬೆಂಗಳೂರಿನ ವಿಜಯನಗರ ಪೊಲೀಸರು 12 ಗಂಟೆ ಒಳಗೇ ಭೇದಿಸಿದ್ದಾರೆ. ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಅಪಹರಣವಾಗಿದ್ದ ವಿಕಾಸ್‌ ಬೋರಾ ಎಂಬುವವರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಕ್ಕಿಪೇಟೆಯಲ್ಲಿ ಚಂದನ್‌ ಇಂಡಸ್ಟ್ರೀಸ್‌ ಹೆಸರಿನ ಪೀಠೋಪಕರಣ ವ್ಯಾಪಾರ ನಡೆಸುತ್ತಿರುವ ವಿಕಾಸ್‌ ಬೋರಾ ಎಎಸ್‌ಒ ಲೇಔಟ್‌ನಲ್ಲಿ ವಾಸವಿದ್ದಾರೆ. ಭಾನುವಾರ ರಜೆ ಇದ್ದ ಕಾರಣ ವಿಕಾಸ್‌ ಮನೆಯಲ್ಲೇ ಇದ್ದರು. ಈ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ, ಪೀಠೋಪಕರಣ ಖರೀದಿಸಬೇಕಿದೆ. ಉತ್ತರಹಳ್ಳಿಗೆ ಬಂದರೆ ಮುಂಗಡ ಹಣ ನೀಡೋದಾಗಿ ಹೇಳಿದ್ದ. ಇದನ್ನು ನಿಜವೆಂದೇ ನಂಬಿದ್ದ ವ್ಯಾಪಾರಿ ವಿಕಾಸ್‌ ಉತ್ತರಹಳ್ಳಿಗೆ ಹೋಗಿದ್ದಾರೆ. ಈ ವೇಳೆ ವಿಕಾಸ್‌ರನ್ನು ಅಪಹರಿಸಲಾಗಿತ್ತು.

ಈ ಸಂಬಂಧ ವಿಕಾಸ್‌ ತಂದೆ ವಿಜಯನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಕಾರ್ಯಾಚರಣೆಗಿಳಿದ ಪೊಲೀಸರು ಕೇವಲ 12 ಗಂಟೆಯಲ್ಲೇ ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಸೇರಿ ಇನ್ನೂ ಎಂಟು ಮಂದಿ ತಲೆಮರೆಸಿಕೊಂಡಿದ್ದು, ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

Share Post