BengaluruPolitics

5 ವರ್ಷ ಚೆನ್ನಾಗಿದ್ದು, 2028ರಲ್ಲೂ ರಿಪೀಟ್‌ ಆಗುವ ಶಕ್ತಿ ಸಿಗಲಿ; ಸಿಎಂ ನಿವಾಸದಲ್ಲಿ ಡಿಕೆಶಿ ಪ್ರಾರ್ಥನೆ

ಬೆಂಗಳೂರು; ಇವತ್ತು ಸಿಎಂ ಮನೆಯಲ್ಲಿ ನಡೆದ ಬ್ರೇಕ್‌ ಫಾಸ್ಟ್‌ ಮೀಟಿಂಗ್‌ನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಫುಲ್‌ ಜೋಶ್‌ನಲ್ಲಿದ್ದರು. ಅವರೇ ಸಿಎಂ ಸಿದ್ದರಾಮಯ್ಯ ನಿವಾಸ ಕಾವೇರಿಯ ಮೀಟಿಂಗ್‌ ಹಾಲ್‌ನ್ನು ಉದ್ಘಾಟನೆ ಮಾಡಿದರು. ಜೊತೆಗೆ ಅದೇ ಮೀಟಿಂಗ್‌ ಹಾಲ್‌ನಲ್ಲಿ ಇರಿಸಲಾಗಿದ್ದ ಗಣಪತಿ ಫೋಟೋಗೆ ಪೂಜೆ ಮಾಡಿ, ಮಂಗಳಾರತಿ ಕೂಡಾ ಮಾಡಿದರು. ಈ ವೇಳೆ ಅವರು ಆಡಿದ ಮಾತುಗಳು ಸ್ವಾರಸ್ಯಕರವಾಗಿದ್ದವು.

ಐದು ವರ್ಷ ಚೆನ್ನಾಗಿದ್ದು, 2028ರಲ್ಲೂ ರಿಪೀಟ್‌ ಆಗುವಂತಹ ಶಕ್ತಿ, ಭಾಗ್ಯ ನಿಮಗೆಲ್ಲಾ ಕೊಡಲಿ ಎಂದು ಡಿ.ಕೆ.ಶಿವಕುಮಾರ್‌ ಪ್ರಾರ್ಥಿಸಿ ಪೂಜೆ ಮಾಡಿದರು. ಸಿಎಂ ಸಿದ್ದರಾಮಯ್ಯ ಹಾಗೂ ಅವರ ಬೆಂಬಲಿಗರು ಐದು ವರ್ಷ ಸಿದ್ದರಾಮಯ್ಯ ಅವರೇ ಸಿಎಂ ಆಗಿರಬೇಕು ಎಂದು ಹೇಳುತ್ತಿದ್ದರು. ಡಿ.ಕೆ.ಶಿವಕುಮಾರ್‌ ಈ ಕಾರಣಕ್ಕಾಗಿಯೇ ಈ ರೀತಿಯಲ್ಲಿ ಮಾತನಾಡಿದರಾ ಎಂಬ ಪ್ರಶ್ನೆ ಎದ್ದಿದೆ. ಇನ್ನೊಂದೆಡೆ ಡಿ.ಕೆ.ಶಿವಕುಮಾರ್‌ ಅವರು ಈ ಮಾತನ್ನು ಹೇಳುತ್ತಲೇ ಕೆಲ ಸಚಿವರು, ಹಾಗೆಯೇ ಲೋಕಸಭಾ ಚುನಾವಣೆಯಲ್ಲೂ ಉತ್ತಮ ಫಲಿತಾಂಶ ಬರಲಿ ಎಂದು ಪ್ರಾರ್ಥಿಸಿ ಎಂದು ಹೇಳುತ್ತಾರೆ. ಆಗ ಡಿ.ಕೆ.ಶಿವಕುಮಾರ್‌ ನಗುತ್ತಾ ಆಯ್ತು ಎನ್ನುತ್ತಾರೆ. ಅನಂತರ ಆರತಿ ತಟ್ಟೆಗೆ ಐನೂರರ ನೋಟುಗಳನ್ನು ತೆಗೆದು ಹಾಕುತ್ತಾರೆ.

Share Post