BengaluruCrime

ಕೇರಳದಲ್ಲಿ ಆರೋಪಿಯಿಂದ ಸುಲಿಗೆ ಪ್ರಕರಣ; ನಾಲ್ವರು ಪೊಲೀಸರ ಅಮಾನತು

ಬೆಂಗಳೂರು; ವಂಚನೆ ಆರೋಪಿಯನ್ನು ಬಂಧಿಸದೇ ಬಿಡಲು ಹಣ ಸುಲಿಗೆ ಮಾಡಲು ಯತ್ನಿಸಿದ್ದ ರಾಜ್ಯದ ನಾಲ್ವರು ಪೊಲೀಸರನ್ನು ಅಮಾನತು ಮಾಡಲಾಗಿದೆ. ಕೇರಳದಲ್ಲಿ ಪತ್ತೆಯಾಗಿದ್ದ ಆರೋಪಿಯನ್ನು ಬಂಧಿಸಲು ನಮ್ಮ ಪೊಲೀಸರು ಹೋಗಿದ್ದರು. ಈ ವೇಳೆ ಆರೋಪಿಯನ್ನು ಬಂಧಿಸದೇ ಬಿಡೋದಕ್ಕೆ ಲಂಚ ಕೇಳಿದ್ದರು. ಈ ಹಿನ್ನೆಲೆಯಲ್ಲಿ ಅಲ್ಲಿನ ಪೊಲೀಸರು ರೆಡ್‌ ಹ್ಯಾಂಡಾಗಿ ಹಿಡಿದು ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಪೊಲೀಸ್‌ ಆಯುಕ್ತ ದಯಾನಂದ್‌ ಅವರು ಆ ನಾಲ್ವರೂ ಅಧಿಕಾರಿಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಇನ್ಸ್‌ಪೆಕ್ಟರ್‌ ಶಿವಪ್ರಕಾಶ್‌, ಹೆಡ್‌ ಕಾನ್‌ಸ್ಟೇಬಲ್‌ಗಳಾದ ವಿಜಯ್‌ ಕುಮಾರ್‌, ಶಿವಾನಿ, ಕಾನ್‌ಸ್ಟೇಬಲ್‌ ಸಂದೇಶ್‌ ಅಮಾನತುಗೊಂಡವರು. ಇವರು ವೈಟ್‌ಫೀಲ್ಡ್‌ ನ ಪೊಲೀಸರಾಗಿದ್ದು, ಕೊಚ್ಚಿಯ ಕಲಂಚೇರಿ ಪೊಲೀಸರಿಗೆ ಇವರು ನಿನ್ನೆ ಸಿಕ್ಕಿಬಿದ್ದಿದ್ದರು. ಆನ್‌ಲೈನ್‌ ವಂಚನೆ ಕೇಸ್‌ ಸಂಬಂಧ ಆರೋಪಿಯೊಬ್ಬನನ್ನು ಬಂಧಿಸಲು ಈ ನಾಲ್ವರೂ ಹೋಗಿದ್ದರು.

 

Share Post