Districts

ಕಳಸಾ ಬಂಡೂರಿ ಯೋಜನೆಗೆ ಕೇಂದ್ರ ಗ್ರೀನ್‌ ಸಿಗ್ನಲ್‌; ಕಾರಜೋಳ ಹರ್ಷ

ಬೆಳಗಾವಿ; ಕಳಸಾ ಬಂಡೂರಿ ನಾಲಾ ಯೋಜನೆಯ ವಿಸ್ತೃತ ಯೋಜನಾ ವರದಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿರುವುದಕ್ಕೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹರ್ಷ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕಾರಣರಾದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೆಖಾವತ್‌, ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಅಭಿನಂದನೆ ತಿಳಿಸಿದರು.

ವಿಧಾನಸಭೆಯಲ್ಲಿ ಮಾತನಾಡಿದ ಅವರು, ಕಳಸಾ ಬಂಡೂರಿ ನಾಲೆ ಆಗಬೇಕೆಂದು ಅನೇಕ ವರ್ಷಗಳಿಂದ ಹೋರಾಟ ನಡೆಯುತ್ತಿತ್ತು. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿಲ್ಲ ಅಂದಿದ್ದರೆ ಈ ಯೋಜನೆಗೆ ಮುಕ್ತಿ ಸಿಗುತ್ತಿದ್ದಿಲ್ಲ. ಅವರರು ಆಡಳಿತಗಾರರು, ತಾಂತ್ರಿಕ ಪರಿಣಿತರು, ನೀರಾವರಿ ತಜ್ಜರು ಹೌದು. ಬಸವರಾಜ ಬೊಮ್ಮಾಯಿ ಅವರ ಮಾರ್ಗದರ್ಶನದಲ್ಲಿ ಇಡಿ ಡಿಪಿಆರ್‌ ಅನ್ನು ಪರಿಷ್ಕರಿಸಿದ್ದೇವೆ ಎಂದು ಹೇಳಿದರು.

ಜಲಾಶಯದ ಎತ್ತರಗಳನ್ನು ಕಡಿಮೆ ಮಾಡಿ ನಮಗೆ ನಿಗದಿಯಾಗಿರುವ ಕಳಸಾದಲ್ಲಿ 1.72 ಟಿಎಂಸಿ, ಬಂಡೂರಿಯಲ್ಲಿ 2.18 ಟಿಎಂಸಿ ಸೇರಿ ಒಟ್ಟು 3.9 ಟಿಎಂಸಿ ನೀರನ್ನು ಉಪಯೋಗ ಮಾಡಿಕೊಳ್ಳುವುದಕ್ಕೆ ಪರಿಷ್ಕೃತ ಡಿಪಿಆರ್‌ ಅನ್ನು ಸಲ್ಲಿಸಿದ್ದೇವು. ಅದಾದ ಮೇಲೆ ಹತ್ತಾರು ಬಾರಿ ದಿಲ್ಲಿಗೆ ಹೋಗಿ ಬಂದಿದ್ದೇವೆ. ಮುಖ್ಯಮಂತ್ರಿಗಳು ಸ್ವತಃ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೆಖಾವತ್‌, ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹತ್ತಿರ ಅನೇಕ ಬಾರಿ ಭೇಟಿ ಮಾಡಿ ಈ ಯೋಜನೆಗೆ ಒಪ್ಪಿಗೆ ಪಡೆದುಕೊಂಡಿದ್ದೇವೆ ಎಂದರು.

ನಮ್ಮವರೇ ಆದ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರು ನಮಗೆ ಜೊತೆ ಸಾಥ್‌ ನೀಡಿದ್ದರು. ಉತ್ತರ ಕರ್ನಾಟಕದ ಬೆಳಗಾವಿಯಲ್ಲಿಯೇ ಅಧಿವೇಶನ ನಡೆದಿರುವಾಗಲೇ ಕಳಸಾ ಬಂಡೂರಿ ನಾಲೆ ಯೋಜನೆಗೆ ಕೇಂದ್ರ ಅನುಮತಿ ನೀಡಿರುವುದು ಸಂತೋಷವಾಗಿದೆ. ಇದಕ್ಕೆ ಕಾರಣರಾದ ನಾಯಕರು ಹಾಗೂ ಅಧಿಕಾರಿಗಳು, ಹೋರಾಟಗಾರರಿಗೆ ಅಭಿನಂದನೆ ತಿಳಿಸಿದರು.

Share Post