BengaluruPolitics

ಯಡಿಯೂರಪ್ಪ ಅವರ ಮಾರ್ಗದರ್ಶನ ಬಿಜೆಪಿಗೆ ಅತ್ಯಗತ್ಯ: ಸಚಿವ ಮುರುಗೇಶ್ ನಿರಾಣಿ

ಬೆಂಗಳೂರು; ದಕ್ಷಿಣ ಭಾರತದಲ್ಲಿ ಬಜೆಪಿಯನ್ನ ಬೇರುಮಟ್ಟದಿಂದ ಸಂಘಟಸಿ ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರವಹಿಸಿರುವ ಮಾಜಿ ಮುಖ್ಯಮಂತ್ರಿ ‌ಬಿ.ಎಸ್.ಯಡಿಯೂರಪ್ಪ ಅವರ ಮಾರ್ಗದರ್ಶನ ಅಗತ್ಯ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ಅವರು ಅಭಿಪ್ರಾಯಪಟ್ಟಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕು ಎಂದರೆ ಯಡಿಯೂರಪ್ಪ ಅವರ ಸಲಹೆ ಹಾಗೂ ಮಾರ್ಗದರ್ಶನ ಅತ್ಯಗತ್ಯ ಎಂದು ಪ್ರತಿಪಾದಿಸಿದರು. ಯಡಿಯೂರಪ್ಪ ಅವರು ಮತ್ತೆ ನಾನು ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಎಲ್ಲಿಯೂ ಹೇಳಿಲ್ಲ. 2023 ರ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕೇಸರಿ ಬಾವುಟ ಹಾರಬೇಕಾದರೆ ನಮಗೆ ಅವರ ನಾಯಕತ್ವ ಬೇಕು ಎಂದು ಹೇಳಿದರು.

ಸಕ್ರಿಯ ರಾಜಕಾರಣದಲ್ಲಿ ಮುಂದುವರೆಯುವುದು, ನಿವೃತ್ತಿ ಘೋಷಣೆ ಮಾಡುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ.ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ ಎಂದು ಯಾರಾದರೂ ಅಂದುಕೊಂಡರೆ ಅದು ತಪ್ಪು ಎಂದರು. ಯಡಿಯೂರಪ್ಪ ಅವರು ಈಗಲೂ ‌18 ರ ಯುವಕರು ನಾಚುವಂತೆ ಪಕ್ಷ ಸಂಘಟನೆ ಹಾಗೂ ಪ್ರವಾಸ ಮಾಡುತ್ತಾರೆ. ಅಡು ಮುಟ್ಟದ ಸೊಪ್ಪಿಲ್ಲ, ಬಿಎಸ್ ವೈ ಹೋಗದ ಸ್ಥಳ ಕರ್ನಾಟಕದಲ್ಲಿ ಇಲ್ಲ ಎಂದು ನಿರಾಣಿ ಅವರು ಪ್ರಶಂಸಿದರು.

Share Post