Districts

ಚಿರತೆ ಚರ್ಮ ಮಾರಾಟಕ್ಕೆ ಯತ್ನ: ಐವರ ಬಂಧನ

ಮೈಸೂರು; ಚಿರತೆಯನ್ನು ಸಾಯಿಸಿ ಅದರ ಚರ್ಮ, ಉಗುರು ಸೇರಿದಂತೆ ವಿವಿಧ ಅಂಗಾಂಗಗಳನ್ನು ಮಾರಾಟಕ್ಕೆ ಯತ್ನಿಸುತ್ತಿದ್ದ ಐವರು ಆರೋಪಿಗಳನ್ನು ಮೈಸೂರಿನಲ್ಲಿ ಬಂಧಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳು ದಾಳಿ ನಡೆಸಿ, ಚಿರತೆ ಚರ್ಮ ಹಾಗೂ ಅಂಗಾಂಗಗಳನ್ನು ವಶಪಡಿಸಿಕೊಂಡಿದ್ದಾರೆ.

 ಹನಗೋಡಿನ‌ ಸಮೀಪದ ಅಬ್ಬೂರಿನ‌ ವ್ಯಕ್ತಿ ಹಾಗೂ ಕಾಡಿನ ವಿವಿಧ ಹಾಡಿಗಳ ನಾಲ್ವರನ್ನು ಬಂಧಿಸಲಾಗಿದೆ. ಇನ್ನೂ ಕೆಲವರು ನಾಪತ್ತೆಯಾಗಿದ್ದು, ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಬಂಧಿತರಿಂದ ಚಿರತೆ ಚರ್ಮ, ನಾಲ್ಕು ಕಾಲಿನ ಭಾಗಗಳು, ಕೃತ್ಯಕ್ಕೆ ಬಳಸಿದ್ದ ಒಂದು ಒಂಟಿ ನಳಿಕೆ‌ ಬಂದೂಕು, ಒಂದು ಬೈಕ್ ವಶಪಡಿಸಿಕೊಳ್ಳಲಾಗಿದೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಹುಣಸೂರು ವನ್ಯಜೀವಿ ವಲಯದಲ್ಲಿ ಚಿರತೆ ಹತ್ಯೆ ಮಾಡಿ ಚರ್ಮ, ನಾಲ್ಕು ಕಾಲಿನ‌ ಭಾಗವನ್ನು ಮಾರಾಟ ಮಾಡಲು ಸಾಗಣೆ ಮಾಡುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಹನಗೋಡು ಪಂಚವಳ್ಳಿ ಮುಖ್ಯರಸ್ತೆಯ ಕಡೇಮನುಗನಹಳ್ಳಿ ಕ್ರಾಸ್ ಬಳಿ ಅರಣ್ಯಾಧಿಕಾರಿಗಳು ದಾಳಿ ನಡೆಸಿ, ಐವರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Share Post