Cinema

ಡಾರ್ಲಿಂಗ್‌ ಪ್ರಭಾಸ್‌ಗೆ ಸರ್ಜರಿ: ಅಭಿಮಾನಿಗಳಲ್ಲಿ ಕಳವಳ- ಶೀಘ್ರ ಗುಣಮುಖರಾಗುವಂತೆ ಹಾರೈಕೆ

ಹೈದರಾಬಾದ್:‌ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ನಟನೆಯ ‘ರಾಧೇಶ್ಯಾಮ್’ ಸಿನಿಮಾ ಮೂಲಕ ತೆರೆಯಲ್ಲಿ ಮಿಂಚುತ್ತಿದ್ದಾರೆ. ಈ ಚಿತ್ರ ಅಂದುಕೊಂಡಷ್ಟು ಯಶಸ್ಸು ಕಾಣಲಿಲ್ಲ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಪ್ರಭಾಸ್ ಸದ್ಯ ‘ಸಾಲಾರ್’ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಸಿನಿಮಾ ಸಂಪೂರ್ಣ ಮಾಸ್ ಆ್ಯಕ್ಷನ್ ಎಂಟರ್ಟೈನಿಂಗ್ ಆಗಿರಲಿದೆ. ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿದ್ದಾರೆ.

ಇತ್ತೀಚೆಗಷ್ಟೇ ‘ಸಾಲಾರ್’ ಸಿನಿಮಾದ ಶೂಟಿಂಗ್ ಶುರುವಾಗಿತ್ತು. ಶೂಟಿಂಗ್ ವೇಳೆ ಪ್ರಭಾಸ್ ಗಾಯಗೊಂಡಿರುವುದಾಗಿ‌ ತಿಳಿದುಬಂದಿದೆ. ಗಾಯವನ್ನು ಪರೀಕ್ಷಿಸಿ, ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದಾರೆ. ವೈದ್ಯರ ಸಲಹೆ ಮೇರೆಗೆ ನಟ ಪ್ರಭಾಸ್ ಚಿಕಿತ್ಸೆಗಾಗಿ ಸ್ಪೇನ್‌ಗೆ ತೆರಳಿದ್ದಾರೆ ಎನ್ನಲಾಗಿದೆ. ಪ್ರಭಾಸ್‌ಗೆ ಸ್ಪೇನ್‌ನ ಬಾರ್ಸಿಲೋನಾದಲ್ಲಿ ಚಿಕಿತ್ಸೆ ನೀಡಲಾಗ್ತಿದ್ದು, ಚಿಕಿತ್ಸೆ ಬಳಿಕ ಒಂದು ತಿಂಗಳ ಕಾಲ ವಿಶ್ರಾಂತಿ ಪಡೆಯುವಂತೆ ಅಲ್ಲಿನ ವೈದ್ಯರು ಸೂಚಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯ ಪ್ರಭಾಸ್ ಅಲ್ಲಿಯೇ ಕೆಲ ದಿನಗಳ ಕಾಲ ವಿಶ್ರಾಂತಿ  ಪಡೆಯಲ್ಲಿದ್ದಾರೆ. ಪ್ರಭಾಸ್ ಸರ್ಜರಿ ಬಗ್ಗೆ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಪ್ರಭಾಸ್ ಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.

 

Share Post