Bengaluru

`ನನ್ನ ನಗರ ನನ್ನ ಬಜೆಟ್’ 2022-23 ಅಭಿಯಾನ:ಗೌರವ್‌ ಗುಪ್ತಾರಿಂದ ಚಾಲನೆ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಹಯೋಗದೊಂದಿಗೆ ಜನಾಗ್ರಹ ಪ್ರತಿಷ್ಠಾನವು ವಾರ್ಷಿಕ ನಗರ ಬಜೆಟ್ ಗಾಗಿ ಸಾರ್ವಜನಿಕರಿಂದ ಸಲಹೆಗಳನ್ನು ಸಂಗ್ರಹಿಸಲಿದ್ದು, ಈ ಬಾರಿ ವಿಶೇಷವಾಗಿ ಉದ್ಯಾನವನ, ಪಾದಚಾರಿ ಮಾರ್ಗ ಹಾಗೂ ಸಾರ್ವಜನಿಕ ಶೌಚಾಲಯಗಳ ಬಗ್ಗೆ ನಾಗರಿಕರ ಪ್ರತಿಕ್ರಿಯೆ ಪಡೆಯುವ ಅಭಿಯಾನಕ್ಕೆ ಆಯುಕ್ತ ಶ್ರೀ ಗೌರವ್ ಗುಪ್ತಾ ಚಾಲನೆ ನೀಡಿದ್ರು.

ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿ, ಜನಾಗ್ರಹ ಪ್ರತಿಷ್ಠಾನದ ಮೂಲಕ ‘ನನ್ನ ನಗರ ನನ್ನ ಬಜೆಟ್’ ಎಂಬ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ. 2015 ರಿಂದಲೂ ಅಭಿಯಾನವನ್ನು ನಡೆಸಿಕೊಂಡು ಬರುತ್ತಿದ್ದು, ಆ ಮೂಲಕ ನಗರದ ಬಜೆಟ್ ನಲ್ಲಿ ಜನರು ಭಾಗವಹಿಸುವಂತೆ ಮಾಡುವುದು ಇದರ ಉದ್ದೇಶವಾಗಿದೆ.

ಮೈ ಸಿಟಿ ಮೈ ಬಜೆಟ್ ವಾಹನವು ಎಲ್ಲಾ ವಾರ್ಡ್ ಗಳಿಗೆ ತೆರಳಿ ನಾಗರಿಕರಿಂದ ಸಹಲೆಗಳನ್ನು ಸಂಗ್ರಹಿಸಲಿದೆ. ಕಳೆದ ಬಾರಿ ಪಾದಚಾರಿ ಮಾರ್ಗ ಮತ್ತು ಯೆಲ್ಲೋ ಸ್ಪಾಟ್(ತೆರೆದ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ) ಬಗ್ಗೆ ಗಮನ ಹರಿಸಲಾಗಿತ್ತು. ಈ ಬಾರಿ ಉದ್ಯಾನವನ, ಪಾದಚಾರಿ ಮಾರ್ಗ ಹಾಗೂ ಸಾರ್ವಜನಿಕ ಶೌಚಾಲಯಗಳ ಬಗ್ಗೆ ನಾಗರಿಕರ ಸಲಹೆಯನ್ನು ನಿರೀಕ್ಷಿಸಲಾಗುತ್ತಿದೆ ಎಂದರು.

ಇಂತಹ ಕಾರ್ಯಕ್ರಮ ಸಕ್ರಿಯವಾಗಿ ನಡೆಯಲಿ. ಇತರ ದೊಡ್ಡ ದೊಡ್ಡ ಮಹಾನಗರಗಳಿಗೆ ಹೋಲಿಸಿದಲ್ಲಿ ಪಾಲ್ಗೊಳ್ಳುವಿಕೆಯಲ್ಲಿ ಬೆಂಗಳೂರು ಸಾಕಷ್ಟು ಮುಂದಿದೆ. ನಗರದಲ್ಲಿ ವಾರ್ಡ್ ಸಮಿತಿಗಳು ಕೂಡ ಸಕ್ರಿಯವಾಗಿ ನಡೆಯುತ್ತಿದ್ದು, ಕಳೆದ ವರ್ಷದ ಆಯವ್ಯಯದಲ್ಲಿ ಪ್ರತಿ ವಾರ್ಡ್ ಗೆ 60 ಲಕ್ಷ ರೂ. ಅನುದಾನವನ್ನು ಬಜೆಟ್ ನಲ್ಲಿ ಮೀಸಲಿಡಲಾಗಿತ್ತು. ಇದನ್ನು ಮುಂದುವರಿಸಿಕೊಂಡು ಹೋಗುವ ಆವಶ್ಯಕತೆ ಇದೆ ಎಂದು ಹೇಳಿದರು.

ಮೈ ಸಿಟಿ ಮೈ ಬಜೆಟ್ ಅಭಿಯಾನವು ವಿವಿಧ ಎನ್.ಜಿ.ಒ, ಆರ್.ಡಬ್ಲ್ಯೂ.ಎಗಳು ಸೇರಿದಂತೆ 40ಕ್ಕೂ ಹೆಚ್ಚು ಸಂಸ್ಥೆಗಳ ಸಹಯೋಗದಲ್ಲಿ ಮಾರ್ಚ್ 15 ರವರೆಗೆ ನಡೆಯಲಿದೆ. ಬಜೆಟ್ ವಾಹನವು ನಗರದ ಎಲ್ಲಾ ವಾರ್ಡ್ ಗಳಲ್ಲಿ ಸಂಚರಿಸಿ ನಾಗರಿಕರಿಂದ ಸಹಲೆಗಳನ್ನು ಸಂಗ್ರಹಿಸಲಿದೆ. ಇದಲ್ಲದೆ ವೆಬ್‌ಸೈಟ್ http://mycitymybudget.in/ ಗೆ ನಾಗರಿಕರು ಭೇಟಿ ನೀಡಿ ಅಭಿಪ್ರಾಯಗಳನ್ನು ತಿಳಿಸಬಹುದು ಎಂದರು.

 

Share Post