Districts

ಒಂದು ಎತ್ತು ಬರೋಬ್ಬರಿ 18 ಲಕ್ಷ ರೂಪಾಯಿಗೆ ಮಾರಾಟ!

ವಿಜಯಪುರ; ತೆರಬಂಡಿ ಓಟದ ಸ್ಪರ್ಧೆಯಲ್ಲಿ ಸಾಕಷ್ಟು ಹೆಸರು ಮಾಡಿದ್ದ ಎತ್ತೊಂದು ಬರೋಬ್ಬರಿ 18 ಲಕ್ಷ ರೂಪಾಯಿಗೆ ಮಾರಾಟವಾಗಿದೆ.. ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಬಬಲಾದಿ ಗ್ರಾಮದ ರಾಮನಗೌಡ ಪಾಟೀಲ್ ಎಂಬುವವರಿಗೆ ಸೇರಿದ ಎತ್ತು ಇದಾಗಿದ್ದು, ಉತ್ತರ ಕರ್ನಾಟಕದ ಭಾಗದಲ್ಲಿ ಈ ಎತ್ತು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿತ್ತು.. ಹಲವು ಸ್ಪರ್ಧೆಗಳಲ್ಲಿ ಜಯಶಾಲಿಯಾಗಿದ್ದ ಎತ್ತನ್ನು ಅಧಿಕ ಬೆಲೆಗೆ ಮಾರಾಟ ಮಾಡಲಾಗಿದೆ..

ಈ ಎತ್ತು ತೆರಬಂಡಿ ಎಳೆಯುವುದರಲ್ಲಿ ನಿಸ್ಸೀಮನಾಗಿತ್ತು.. ಉತ್ತರ ಕರ್ನಾಟಕ ಭಾಗದಲ್ಲಿ ಎಲ್ಲಿಯೇ ಸ್ಪರ್ಧೆ ನಡೆದರೂ ಈ ಭಾಗವಹಿಸುತ್ತಿದ್ದ ಎತ್ತು ಹತ್ತಾರು ಪ್ರಶಸ್ತಿಗಳನ್ನು ಗಳಿಸಿಕೊಂಡು ಬಂದಿದೆ.. ಇದುವರೆಗೂ ಈ ಎತ್ತು ಬಹುಮಾನದ ರೂಪದಲ್ಲೇ ಸುಮಾರು 15 ಲಕ್ಷ ರೂಪಾಯಿ ನಗದು ಬಹುಮಾನ ಪಡೆದಿದೆ.. ಇದರ ಜೊತೆ ಎರಡು ಬೆಳ್ಳಿಯ ಗದೆಗಳು, 4 ಬೈಕ್‌ಗಳು ಹಾಗೂ 40 ಗ್ರಾಂ ಚಿನ್ನವನ್ನು ಕೂಡಾ ಗೆದ್ದಿದೆ..

ಇದಕ್ಕೆ ಮಾಲೀಕರು ಹಿಂದೂಸ್ತಾನ್‌ ಎಚ್‌ಪಿ ಎಂದು ನಾಮಕರಣ ಮಾಡಿದ್ದರು.. ಹಾಲು, ಮೊಟ್ಟೆ, ಧವಸ ಧಾನ್ಯ ಕೊಟ್ಟು ದಷ್ಟಪುಷ್ಟವಾಗಿ ಬೆಳೆಸಿದ್ದ ರೈತ ರಾಮನಗೌಡರು, ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕಿನ ಹಿಟ್ನಾಳ ಗ್ರಾಮದ ರೈತ ಸದಾಶಿವ ಡಾಂಗೆ ಅವರಿಗೆ ಎತ್ತನ್ನು ಮಾರಾಟ ಮಾಡಿದ್ದಾರೆ..

Share Post