Districts

ರಾಜ್ಯಸಭಾ ಚುನಾವಣೆ; ನಮ್ಮ ಎರಡನೇ ಅಭ್ಯರ್ಥಿ ಕೂಡಾ ಗೆಲ್ಲುತ್ತಾರೆ; ಸಿದ್ದರಾಮಯ್ಯ ವಿಶ್ವಾಸ

ಮೈಸೂರು; ರಾಜ್ಯಸಭಾ ಚುನಾವಣೆಯಲ್ಲಿ ನಮ್ಮ ಎರಡನೇ ಅಭ್ಯರ್ಥಿ ಮನ್ಸೂರ್‌ ಅಲಿ ಖಾನ್‌ ಗೆದ್ದೇ ಗೆಲ್ಲುತ್ತಾರೆ. ಹೀಗಾಗಿ ಜೆಡಿಎಸ್‌ ಪಕ್ಷದವರು ತಮ್ಮ ಅಭ್ಯರ್ಥಿಯನ್ನು ಕಣದಿಂದ ನಿವೃತ್ತಿಗೊಳಿಸಿ, ನಮಗೆ ಬೆಂಬಲ ನೀಡಲಿ ಎಂದು ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ನಮ್ಮ ಬಳಿ 25 ಮತಗಳಿವೆ. ಗೆಲ್ಲುವುದಕ್ಕೆ ಎಷ್ಟು ಮತಗಳು ಬೇಕೋ ಅಷ್ಟು ಮತಗಳು ಬರಲಿವೆ. ಆತ್ಮಸಾಕ್ಷಿಯಾಗಿ ಜೆಡಿಎಸ್‌, ಬಿಜೆಪಿ ಶಾಸಕರು ನಮಗೆ ಮತ ಹಾಕ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದೇವೇಗೌಡರು ಪ್ರಧಾನಿಯಾಗಲು ನಾವು ಬೆಂಬಲ ನೀಡಿದ್ದೇವೆ, ಕುಮಾರಸ್ವಾಮಿ ಸಿಎಂ ಆಗಲು ಕೂಡಾ ಕಾಂಗ್ರೆಸ್‌ ಬೆಂಬಲ ನೀಡಿದೆ. ಹೀಗಾಗಿ, ಜೆಡಿಎಸ್‌ ನಾಯಕರು ನಮ್ಮನ್ನು ಬೆಂಬಲಿಸುತ್ತಾರೆಂಬ ವಿಶ್ವಾಸ ಇದೆ. ರಾಜ್ಯಸಭಾ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದರು. ಇನ್ನು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಸಿಎಂ ಇಬ್ರಾಹಿಂಗೆ ಮಾನ ಮರ್ಯಾದೆ ಇಲ್ಲ, ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಜೆಡಿಎಸ್‌ನಲ್ಲಿ ಅವರ ನಾಯಕರು ಹೇಳಿದಂತೆ ಇಬ್ರಾಹಿಂ ಕೇಳಬೇಕು. ಕೂರು ಅಂದರೆ ಕೂರಬೇಕು, ನಿಲ್ಲು ಅಂದರೆ ನಿಲ್ಲಬೇಕು ಎನ್ನುವ ಪರಿಸ್ಥಿತಿ ಇದೆ ಎಂದು ಲೇವಡಿ ಮಾಡಿದರು. ಇನ್ನು ಸಂಸದ ಪ್ರತಾಪ ಸಿಂಹ ಹೇಳಿಕೆಗೂ ಸಿದ್ದರಾಮಯ್ಯ ತಿರುಗೇಟು ನೀಡಿದರು.

Share Post